ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಮಲಗಳಲೆ ಗ್ರಾಮದಲ್ಲಿ ನಾಲ್ಕು ಆನೆಗಳು ತಮ್ಮ ಮರಿಗಳೊಂದಿಗೆ ಕಾಫಿ ತೋಟದಲ್ಲಿ ಓಡಾಡುವ ಮೂಲಕ ತೋಟದ ಕಾರ್ಮಿಕರನ್ನು ಭಯಭೀತರನ್ನಾಗಿಸಿವೆ.
ಮಲೆನಾಡಿನಲ್ಲಿ ಪ್ರತಿನಿತ್ಯ ಆನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಕಾಡಂಚಿನಲ್ಲಿ ಮತ್ತು ಕಾಡುಗಳಲ್ಲಿ ಆನೆಗಳಿಗೆ ಬೇಕಾಗುವಂತಹ ಹಲಸು, ಬೈನೆ, ಬಿದಿರು ಮುಂತಾದವುಗಳು ಕಡಿಮೆಯಾಗುತ್ತಿರುವುದು ನಾಡಿನಡೆಗೆ ಬರಲು ಪ್ರಮುಖ ಕಾರಣವಾಗಿದೆ. ಈಗಾಗಲೇ ಅರಣ್ಯ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳು, ಕಾಡಾನೆಗಳು ನಾಡಿಗೆ ಬರುವುದಕ್ಕೆ ಪ್ರಮುಖ ಕಾರಣ ಕಾಡಿನ ಒತ್ತುವರಿ ಮತ್ತು ಕಾಡಂಚಿನ ಭಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿರುವುದು ಎಂಬ ಮಾಹಿತಿ ನೀಡಿದ್ದಾರೆ ಎಂದು ಸ್ವತಃ ಸಂಸದರೇ ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ.
ಇದು ಮಲೆನಾಡು ಭಾಗದ ಕೆಲವು ಮಂದಿ ಕಾಡುಗಳನ್ನು ನಾಶ ಮಾಡಿ ಅಕ್ರಮವಾಗಿ ಕಾಫಿ ತೋಟಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರಾ...? ಹಾಗಿದ್ರೆ ಅರಣ್ಯ ಭೂಮಿ ಒತ್ತುವರಿ ಆಗಿರುವುದೇ ಇದಕ್ಕೆಲ್ಲಾ ಕಾರಣವೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರವೇ ಉತ್ತರ ನೀಡಬೇಕಾಗಿದೆ. ಜೊತೆಗೆ ಕಾಡು ಪ್ರಾಣಿಗಳ ನಾಡಿನ ವಲಸೆಗೆ ಬ್ರೇಕ್ ಹಾಕಬೇಕಿದೆ.