ಹಾಸನ: ಕಾನೂನು ರೂಪಿಸುವಂತಹ ವಂಶದಲ್ಲಿ ಹುಟ್ಟಿ,ಫಿಲಂನಲ್ಲಿ ಬರೋ ವಿಲನ್ ತರ ಬಂದು ಹಲ್ಲೆ ಮಾಡೋದು ಎಷ್ಟು ಸರಿ? ಅಸಹ್ಯ ಆಗಲ್ವಾ? ಇಂಥ ಕೃತ್ಯ ಎಸಗಿರುವ ವಂಶಕ್ಕೆ ನಾಚಿಕೆಯಾಗಬೇಕು ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರು, ದೇವೇಗೌಡರ ಕುಟುಂಬದ ವಿರುದ್ಧ ಹರಿಹಾಯ್ದರು.
ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ನಂಬಿಹಳ್ಳಿ ಗ್ರಾಮದಲ್ಲಿ ಡಿ. 3ರ ರಾತ್ರಿ ಬೆಂಗಳೂರಿನ ಬಿಜೆಪಿ ಕಾರ್ಪೋರೇಟರ್ ಆನಂದ್ ಹೊಸೂರು ಮತ್ತು ಅವರ ಸ್ನೇಹಿತರ ಮೇಲೆ ಸೂರಜ್ ರೇವಣ್ಣ ಮತ್ತು ಆತನ ಶಿಷ್ಯಂದಿರು ನಡೆಸಿದ್ದ ಹಲ್ಲೆ ಪ್ರಕರಣದ ಸಂಬಂಧ ಚನ್ನರಾಯಪಟ್ಟಣಕ್ಕೆ ಆಗಮಿಸಿ ಮಾತನಾಡಿದ ಅವರು, ಬಿಜೆಪಿ ಕಾರ್ಪೋರೇಟರ್ ಆನಂದ್ ಹೊಸೂರು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಮುಗಿಸಿ ತನ್ನ ಸ್ನೇಹಿತನ ಮನೆಯಲ್ಲಿ ಊಟ ಮಾಡಿ, ಕೆಲಕಾಲ ವಿಶ್ರಾಂತಿ ಪಡೆದು, ಬೆಂಗಳೂರಿಗೆ ವಾಪಸ್ ಹೊರಡಲು ಸಿದ್ಧತೆ ನಡೆಸಿದ್ದರು. ಈ ವೇಳೆ ಫಿಲಂನಲ್ಲಿ ಬರುವಂತಹ ವಿಲನ್ಗಳ ರೀತಿ 30-40 ವಾಹನಗಳಲ್ಲಿ ಬಂದು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಾಗೂ ಕಾರ್ಪೊರೇಟರ್ ಮೇಲೆ ಮಚ್ಚು-ಲಾಂಗು ದೊಣ್ಣೆಯಿಂದ ಹಲ್ಲೆ ಮಾಡಿರುವುದು ಕಾನೂನು ರೂಪಿಸುವಂತಹ ವಂಶದಲ್ಲಿ ಹುಟ್ಟಿರುವ ಸೂರಜ್ ರೇವಣ್ಣಗೆ ಶೋಭೆ ತರುವುದಿಲ್ಲ. ಅವರಿಗೆ ಕಾನೂನು ಪ್ರಜ್ಞೆ ಇಲ್ವಾ ಎಂದರು.
ಈ ಮೊದಲು ಅವರದೇ ಆಡಳಿತವಿತ್ತು. ಯಾವ ರೀತಿ ಬೇಕೋ ಹಾಗೇ ಅವರು ಕಾನೂನನ್ನು ಮಾರ್ಪಾಡು ಮಾಡಿಕೊಂಡು, ಹಾಸನ ಜಿಲ್ಲೆಯನ್ನು ಭಯದ ವಾತಾವರಣದಲ್ಲಿ ಇಟ್ಟುಕೊಂಡಿದ್ದರು. ಅಂತಹ ಭಯದ ರಾಜಕೀಯ ವಾತಾವರಣ ನಿರ್ಮೂಲನೆಯಾಗಿ,ಕಾನೂನು ಪರಿಪಾಲನೆ ಮಾಡುವಂತಹ ವಾತಾವರಣ ಸೃಷ್ಟಿಯಾಗಬೇಕು. ಆದ್ರೆ, ತಪ್ಪಿತಸ್ಥರ ವಿರುದ್ಧ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನು ಶೀಘ್ರವೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಇನ್ನು, ಪ್ರಕರಣಕ್ಕೆ ಸೂರಜ್ ರೇವಣ್ಣ ಅವರೇ ನೇರ ಹೊಣೆಗಾರರು. ಇದು ನನ್ನ ಹೇಳಿಕೆಯಲ್ಲ. ಗಲಾಟೆಯ ಸಂದರ್ಭದಲ್ಲಿ ಮಾಜಿ ಸಚಿವ ರೇವಣ್ಣನ ಪುತ್ರ ಸೂರಜ್ ರೇವಣ್ಣ ಇದ್ದರು ಎಂಬುದಕ್ಕೆ ಅವರಿಂದ ಹಲ್ಲೆಗೊಳಗಾದ ನಮ್ಮ ಕಾರ್ಯಕರ್ತರೇ ದೂರು ನೀಡಿದ್ದರಿಂದ ಅವರ ಮೇಲೆ ಪ್ರಕರಣ ದಾಖಲಾಗಿದೆ ಎಂದ್ರು.