ಹಾಸನ(ಬೇಲೂರು): ಸಾಲ ಕೊಡಿಸುವುದಾಗಿ ನಂಬಿಸಿ 2 ಲಕ್ಷ ದೋಚಿದ್ದ ಖದೀಮನನ್ನ ಬೇಲೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡಿ.ಕೆ.ಗೋಪಾಲ್ (35) ಬಂಧಿತ ಆರೋಪಿ. ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ತೊಗರ್ಸಿ ಗ್ರಾಮದವನು. ಜು.16 ರಂದು ಬೇಲೂರು ತಾಲೂಕು ಹಗರೆ ಗ್ರಾಮದ ಟೀ ಅಂಗಡಿಯ ಮಾಲೀಕ ಧರ್ಮಯ್ಯನಿಗೆ ಲೋನ್ ಕೊಡಿಸುವುದಾಗಿ 2 ಲಕ್ಷ ನಗದು ಮತ್ತು ಮೂರು ಖಾಲಿ ಚೆಕ್ಗೆ ಸಹಿ ಪಡೆದು ಬ್ಯಾಂಕ್ ನಿಂದ ಪರಾರಿಯಾಗಿದ್ದ. ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು.
ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ ಪೊಲೀಸರು ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯನ್ನೊಳಗೊಂಡಂತೆ ಶಿವಮೊಗ್ಗ ಜಿಲ್ಲೆಗೆ ಮೂರು ತಂಡ ರಚಿಸಿ ಆರೋಪಿಗೆ ಬಲೆ ಬೀಸಿದ್ದರು. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಬಸ್ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ಆತನನ್ನ ಜು. 29ರಂದು ವಶಕ್ಕೆ ಪಡೆದು ತನಿಖೆ ನಡೆಸಲಾಗಿತ್ತು.
ಅಂತರ್ ಜಿಲ್ಲೆಯ ವಂಚಕ: ಆರೋಪಿ ಡಿ.ಕೆ.ಗೋಪಾಲನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆತ 5 ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಬೇಲೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2 ಪ್ರಕರಣ, ಗಂಡಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 1 ಪ್ರಕರಣ, ತುಮಕೂರು ಜಿಲ್ಲೆಯ ಹಂದನಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಪ್ರಕರಣದ ಜೊತೆಗೆ ತಿಪಟೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 1 ಪ್ರಕರಣದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.
30 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ವಶ: ಬಂಧಿತ ಆರೋಪಿಯಿಂದ ನಗದು, ಒಂದು ಕಾರು, ಮತ್ತು 8 ಚೆಕ್ ಸೇರಿದಂತೆ 30 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಂಡಿದ್ದು, ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.