ಹಾಸನ: ಅರಸೀಕೆರೆ ತಾಲೂಕಿನ ಚಿಕ್ಕಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭ್ರಷ್ಟಾಚಾರ ನಡೆದಿರುವುದರಿಂದ ಕಾರ್ಯದರ್ಶಿ ರೇಣುಕಪ್ಪ ಮತ್ತು ಸಹಕಾರ ಸಂಘಗಳ ಮೇಲ್ವಿಚಾರಕ ಓಂಕಾರ ಮೂರ್ತಿಯನ್ನು ಅಮಾನತು ಮಾಡಬೇಕು. ಜೊತೆಗೆ ಈ ಸಂಘವನ್ನೇ ಅಮಾನತ್ತಿನಲ್ಲಿಟ್ಟು ತನಿಖೆ ನಡೆಸಬೇಕು ಎಂದು ರಾಜ್ಯ ರೈತ ಸಂಘದ ಮುಖಂಡ ಜಯಣ್ಣ ಆಗ್ರಹಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಘದ ಕಾರ್ಯದರ್ಶಿ ರೇಣುಕಪ್ಪ ಮತ್ತು ಮೇಲ್ವಿಚಾರಕ ಓಂಕಾರಮೂರ್ತಿ ಅವರನ್ನು ತಕ್ಷಣ ಅಮಾನತು ಮಾಡಬೇಕು ಹಾಗೂ ತನಿಖೆಗೆ ಆದೇಸಿಸಬೇಕೆಂದು ಸರ್ಕಾರಕ್ಕೆ ಹಾಗೂ ಸಹಕಾರ ಸಚಿವರಿಗೆ ಒತ್ತಾಯಿಸುತ್ತೇವೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಜಾರಿಗೆ ತಂದ ಸಾಲ ಮನ್ನಾ ಯೋಜನೆ ಅಡಿ ಓಂಕಾರ ಮೂರ್ತಿ ಅವರ ಒಂದೇ ಕುಟುಂಬದಲ್ಲಿ 12,00,000 ಸಾಲ ನೀಡಿದಂತೆ ಮಾಡಿ, ಸುಮಾರು 5ಲಕ್ಷ ರೂ. ಮನ್ನಾ ಮಾಡಿಕೊಳ್ಳಲಾಗಿದೆ. ಇವರೆಲ್ಲರೂ ಅವಿಭಕ್ತ ಕುಟುಂಬಕ್ಕೆ ಸೇರಿದವರಾಗಿದ್ದು, ಒಂದೇ ಕುಟುಂಬದವರಿಗೆ 3 ಪಡಿತರ ಚೀಟಿ ಕೊಡುವಂತೆ ನೋಡಿಕೊಂಡಿದ್ದು, ಮೂವರಿಗೂ ಸಾಲಮನ್ನಾ ಆಗುವಂತೆ ನೋಡಿಕೊಂಡಿರುತ್ತಾರೆ. ಬೇರೆ ಸಂಘಗಳಿಗೆ ಸಾಲ ನೀಡದೇ ವಂಚಿಸಲಾಗಿದೆ ಎಂದು ಆರೋಪಿಸಿದರು.
ಅಲ್ಲದೇ ಚಿಕ್ಕಮ್ಮನಹಳ್ಳಿ ಸಹಕಾರಿ ಸಂಘದ ವ್ಯಾಪ್ತಿಯ ಹೊರತಾಗಿ ಇವರುಗಳ ಸಂಬಂಧಿಕರಿಗೂ ಸಾಲ ಕೊಡಿಸಿ ಸ್ವಜನ ಪಕ್ಷಪಾತ ಮಾಡಿದ್ದಾರೆ. ಬೇರೆ ಬೇರೆ ಬ್ಯಾಂಕುಗಳಲ್ಲಿ ಬೆಳೆ ಸಾಲ ಪಡೆದು ಸುಸ್ತಿದಾರರಾಗಿದ್ದರೂ ಕೂಡ ಸಹಕಾರ ಸಂಘದ ನಿಯಮ ಉಲ್ಲಂಘಿಸಿ ಸಾಲ ನೀಡಿದೆ ಬೇರೆ ರೈತರು ಸಾಲ ಕೇಳಲು ಬಂದರೆ ಬೇರೆ ಬ್ಯಾಂಕಿನ ತೀರುವಳಿ ಪತ್ರವನ್ನು ತರುವಂತೆ ಹೇಳಿ ಕಳಿಸುತ್ತಾರೆ ಎಂದು ದೂರಿದರು.
ಇದೆಲ್ಲವೂ ಆಡಳಿತ ಮಂಡಳಿಯವರು ಸೇರಿದಂತೆ ಎಲ್ಲರೂ ಒಟ್ಟುಗೂಡಿ ಮಾಡಿರುವ ದೊಡ್ಡ ಭ್ರಷ್ಟಾಚಾರವಾಗಿದೆ. ಇದನ್ನು ಮುಚ್ಚಿಹಾಕಲು ಬೇರೆ ನಿರ್ದೇಶಕರು ಆಯ್ಕೆ ಆಗಬಾರದೆಂಬ ದುರುದ್ದೇಶದಿಂದ ಇವರ ಮಾತನ್ನು ಕೇಳುವ ನಿರ್ದೇಶಕರನ್ನು ಮಾತ್ರ ಆಯ್ಕೆ ಮಾಡುವ ಉದ್ದೇಶದಿಂದ ಸಾಲಗಾರರಲ್ಲದ ಸುಮಾರು 79 ಜನ ಹೊಸ ಷೇರುದಾರರನ್ನು ಒಂದೇ ದಿನ ನೇಮಿಸಲಾಗಿದೆ.
ಸಹಕಾರ ಸಂಘದ ನಿಯಮ ಪಾಲಿಸದೇ, ಕೇವಲ ಷೇರುದಾರರು 4 ತಿಂಗಳಲ್ಲಿ ಯಾವುದೇ ವಹಿವಾಟು ನಡೆಸದೇ ಇದ್ದರೂ ಅವರು ಎಸ್ಪಿ ಖಾತೆ ಹೊಂದಿಲ್ಲದೇ ಇದ್ದರೂ, ಯಾವುದೇ ಠೇವಣಿ ಇಡದಿದ್ದರೂ ಅವರುಗಳಿಗೆ ಜಾಮೀನು ಸಾಲ ಎಂಬ ಹೆಸರಿನಲ್ಲಿ ಸಾಲಗಾರರ ಪಟ್ಟಿಗೆ ಸೇರಿಸಲಾಗಿದೆ. ಪ್ರತಿಯೊಬ್ಬರಿಗೆ 2000 ಮತ್ತು 3000 ದಂತೆ 79 ಜನಕ್ಕೆ ಸಾಲ ನೀಡಿದ ಹಾಗೆ ದಾಖಲಾತಿ ಸೃಷ್ಟಿಸಿ ಅಕ್ರಮ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿರುವುದಾಗಿ ದೂರಿದರು.