ಹಾಸನ: ಕುಟುಂಬದ ರಾಜಕೀಯ ಉನ್ನತಿಗೆ ಅನ್ಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಅನುಭವಿಸಿದ ನಂತರ ದೂರ ತಳ್ಳುವ ತಂತ್ರಗಾರಿಕೆ ದೇವೇಗೌಡರದು ಎಂದು ಎ.ಮಂಜು ಟೀಕಿಸಿದರು.
ಪಟ್ಟಣದ ಚನ್ನಬಸವೇಶ್ವರ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸ್ವಂತ ಶಕ್ತಿಯಿಂದ ದೇವೇಗೌಡರು ರಾಜಕೀಯ ಅಧಿಕಾರ ಹೊಂದಿಲ್ಲ. ಅದು ಹೊಂದಾಣಿಕೆಯಿಂದ ಮಾತ್ರ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದ ಬೆಂಬಲದಿಂದ ದೇವೇಗೌಡರು ಪ್ರಧಾನಿಯಾದರು. ರಾಜ್ಯದಲ್ಲಿಯೂ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಮಗ ರೇವಣ್ಣನನ್ನು ಮಂತ್ರಿ ಮಾಡಿದರು. ಮತ್ತೊಬ್ಬ ಪುತ್ರನನ್ನು ಸಿಎಂ ಮಾಡಿದ್ದಾರೆ ಎಂದರು.
ರೇವಣ್ಣ ಪುನಃ ಮಂತ್ರಿಯಾಗಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಮೊಮ್ಮಕ್ಕಳನ್ನು ಹಾಸನ ಮತ್ತು ಮಂಡ್ಯ ಲೋಕಸಭಾ ಚುಣಾವಣೆಯಲ್ಲಿ ನಿಲ್ಲಿಸಿ ಮೂರನೇ ತಲೆಮಾರಿನ ರಾಜಕಾರಣಕ್ಕೆ ಮುಂದಾಗಿದ್ದಾರೆ. ಅಲ್ಲದೆ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಇಡೀ ಕುಟುಂಬವನ್ನು ರಾಜಕಾರಣಕ್ಕೆ ತರುತ್ತಿರುವುದು ಸಮಾಜ ಸೇವೆ ಮಾಡಲು ಅಲ್ಲ. ಅದು ಕುಟುಂಬ ರಾಜಕಾರಣದ ವಿಸ್ತರಣೆಯಾಗಿದೆ ಎಂದು ವ್ಯಂಗ್ಯವಾಡಿದರು. ಪ್ರಜ್ವಲ್ ರೇವಣ್ಣಗೆ 10 ಹಸುಗಳಿಂದ 9 ಕೋಟಿ ಆದಾಯ ಬಂದಿದೆ ಎಂದು ಅಫಿಡವಿಟ್ ಸಲ್ಲಿಸಿದ್ದಾರೆ.
ಕೇವಲ ಹತ್ತು ಹಸುಗಳಿಂದ 9 ಕೋಟಿ ಆದಾಯ ಬರುವ ಮಾರ್ಗವನ್ನು ಸಾರ್ವಜನಿಕವಾಗಿ ಪ್ರಜ್ವಲ್ ರೇವಣ್ಣ ರೈತರಿಗೆ ತಿಳಿಸಿಕೊಟ್ಟರೆ ನಮ್ಮ ಬಡ ರೈತರು ಕೂಡ ಆರ್ಥಿಕವಾಗಿ ಸಬಲರಾಗಲಿದ್ದಾರೆ. ಈ ಕುರಿತು ಹೋರಾಟ ಮುಂದುವರಿಸುತ್ತೇನೆ ಎಂದರು.
ವಿಧಾನ ಪರಿಷತ್ ಸದಸ್ಯೆ ತಾರಾ ಮಾತನಾಡಿ, ಇಡೀ ಪ್ರಪಂಚವೇ ಮೋದಿ ಅವರನ್ನು ಎದುರು ನೋಡುತ್ತಿದೆ. ಇದಕ್ಕೆ ಕಾರಣ ಅವರು ಕಳೆದ ಐದು ವರ್ಷಗಳಲ್ಲಿ ಅನುಷ್ಠಾನಕ್ಕೆ ತಂದ ಯೋಜನೆಗಳು ದೇಶದ ಅಭಿವೃದ್ಧಿಗೆ ಕಾರಣವಾಗಿದೆ. ರಾಷ್ಟ್ರ ಮತ್ತು ರಾಜ್ಯದಲ್ಲಿನ ರಾಜಕಾರಣದಲ್ಲಿ 3ಜಿ, 4ಜಿ ರಾಜಕಾರಣ ಆರಂಭಗೊಂಡಿದೆ. ಮುಂದೆ 5ಜಿ ಕೂಡ ಬರುವ ಸಾಧ್ಯತೆ ಇದೆ. ಇದಕ್ಕೆ ಯುವ ಸಮುದಾಯ ಅವಕಾಶ ಮಾಡಿಕೊಡಬಾರದು. ಮೊಬೈಲ್ ಬಳಕೆಯಲ್ಲಿ ಈ 3ಜಿ, 4ಜಿ ಇರಲಿ, ಆದರೆ ರಾಜಕಾರಣದಲ್ಲಿ ಸುಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ನೆಹರು ಮತ್ತು ದೇವೇಗೌಡರ ಕುಟುಂಬ ರಾಜಕಾರಣದ ಬೆಳವಣಿಗೆಯನ್ನು ಪರೋಕ್ಷವಾಗಿ ಟೀಕಿಸಿದರು.