ಗದಗ: ಕ್ಷುಲ್ಲಕ ಕಾರಣಕ್ಕಾಗಿ ತಂದೆ-ಮಗನ ಮಧ್ಯೆ ಉಂಟಾದ ಜಗಳ ತಂದೆಯ ಕೊಲೆಯಲ್ಲಿ ಮುಗಿದಿದೆ. ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಭರಮಪ್ಪ ದೊಡ್ಡಮನಿ (56) ಮೃತ ವ್ಯಕ್ತಿ. ಸುರೇಶ್ ಕೊಲೆಗೈದ ಆರೋಪಿ.
ತಂದೆ ಮಗನ(ಭರಮಪ್ಪ ಹಾಗೂ ಸುರೇಶ್) ನಡುವೆ ನಿತ್ಯ ಕಲಹ ನಡೆಯುತ್ತಿತ್ತಂತೆ. ನಿನ್ನೆ (ಶನಿವಾರ) ರಾತ್ರಿ ಕೂಡ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ಈ ವೇಳೆ ಜಗಳ ವಿಕೋಪಕ್ಕೆ ಹೋಗಿ ಕುಪಿತನಾದ ಸುರೇಶ್ ಮನೆಯಲ್ಲಿದ್ದ ಚಾಕುವಿನಿಂದ ತಂದೆಯ ಹೊಟ್ಟೆೆ ಹಾಗೂ ಎದೆಗೆ ಮನಬಂದಂತೆ ಚುಚ್ಚಿದ್ದಾನೆ. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ಭರಮಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
![Son kills father over trivial reasons](https://etvbharatimages.akamaized.net/etvbharat/prod-images/15290111_thumb.jpg)
ತಂದೆಯ ಸಾವಿನ ಬಳಿಕ ಆರೋಪಿ ಸುರೇಶ್ ಪರಾರಿಯಾಗಿದ್ದಾನೆ ಎನ್ನಲಾಗ್ತಿದೆ. ಸುದ್ದಿ ತಿಳಿದ ಇನ್ಸ್ಪೆಕ್ಟರ್ ರವಿ ಕಪ್ಪತನವರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.