ಗದಗ: ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್-19 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವುದು ನಮಗೆಲ್ಲ ಒಂದು ಹಂತದಲ್ಲಿ ನೆಮ್ಮದಿ ನೀಡಿದೆ. ಆದರೆ ಕೋವಿಡ್-19 ಸೋಂಕು ತಡೆ ಕುರಿತ ಜಿಲ್ಲೆಯ ಸಾರ್ವಜನಿಕರು, ಯುವ ಜನರು ಮತ್ತು ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಜೀವನವನ್ನು ನಡೆಸಬೇಕಾದ ಕುರಿತು ರಾಜ್ಯದ ಗಣಿ ಭೂವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಮನವಿ ಮಾಡಿದ್ದಾರೆ.
ಕೋವಿಡ್-19 ಸೋಂಕಿನ ತಡೆ ಮತ್ತು ನಿಯಂತ್ರಣ ಕುರಿತು ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ, ಅನವಶ್ಯಕ ಓಡಾಟ, ಪ್ರಯಾಣ ನಿಲ್ಲಿಸುವ, ಮುಖಕ್ಕೆ ಮಾಸ್ಕ್, ಸ್ಯಾನಿಟೈಸರ್ ಉಪಯೋಗ, ಆಗಾಗ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದು ನಮ್ಮ ನಿತ್ಯದ ಅಭ್ಯಾಸವಾಗಬೇಕು. ಎಲ್ಲರೂ ಈ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಿದಲ್ಲಿ ಮಾತ್ರ ಕೋವಿಡ್-19 ಸೋಂಕನ್ನು ಯಶಸ್ವಿಯಾಗಿ ತಡೆಗಟ್ಟಬಹುದು. ಕೋವಿಡ್-19 ಈಗ ದೇಶದ, ಸರ್ಕಾರದ ಸಮಸ್ಯೆ ಮಾತ್ರವಲ್ಲ ಪ್ರತಿ ವ್ಯಕ್ತಿ, ಕುಟುಂಬ, ಸಮಾಜಗಳ ಅಳಿವು ಉಳಿವಿನ ಪ್ರಶ್ನೆ ಎಂಬುದನ್ನು ನಾವು ಅರಿತುಕೊಂಡು ತಪ್ಪದೇ ವೈಯಕ್ತಿಕ, ಸಾಮಾಜಿಕ ಅಂತರದಂತಹ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಸಚಿವ ಸಿ.ಸಿ.ಪಾಟೀಲ ತಿಳಿಸಿದ್ದಾರೆ.