ಗದಗ: ರಾಜ್ಯಸಭೆ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ನನಗೆ ಆಸಕ್ತಿ ಇಲ್ಲ. ನಾಲ್ಕು ಗೋಡೆಗಳ ಮಧ್ಯೆ ನನ್ನ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಗದಗ ಜಿಲ್ಲಾ ಆಡಳಿತ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ ಅಷ್ಟೇ. ರಾಜ್ಯಸಭೆ, ವಿಧಾನ ಪರಿಷತ್ ಟಿಕೆಟ್ಗೆ ನನಗಿಂತ ಹಿರಿಯ ವರಿಷ್ಠರು ಪಕ್ಷದಲ್ಲಿದ್ದಾರೆ. ಪಕ್ಷದ ಮುಖಂಡರು ಅದನ್ನು ನೋಡಿಕೊಳ್ಳುತ್ತಾರೆ. ರಾಜ್ಯಾಧ್ಯಕ್ಷರು, ಯಡಿಯೂರಪ್ಪನವರು, ಕೋರ್ಕಮಿಟಿಯವರು ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ತಾರೆ. ಪ್ರಹ್ಲಾದ್ ಜೋಷಿ, ಸದಾನಂದ ಗೌಡರಂತ ಕೇಂದ್ರ ಸಚಿವರು ಇದ್ದಾರೆ. ಅವರೆಲ್ಲಾ ಇದನ್ನು ನೋಡಿಕೊಳ್ಳುತ್ತಾರೆ. ಎಲ್ಲರನ್ನೂ ಸಮಾಧಾನ ಮಾಡುವ ಶಕ್ತಿ ನಮ್ಮ ಪಕ್ಷದ ನಾಯಕತ್ವಕ್ಕಿದೆ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಸಾಮಾನ್ಯ ಕಾರ್ಯಕರ್ತನಾಗಿ ನಾನು ತಲೆ ಬಾಗುತ್ತೆನೆ ಎಂದರು.
ಸಚಿವರ ಈ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ರಮೇಶ್ ಕತ್ತಿ, ಪ್ರಭಾಕರ ಕೋರೆಗೆ ಟಿಕೆಟ್ ನೀಡದಿದ್ದಕ್ಕೆ ಅಸಮಾಧಾನಗೊಂಡ್ರಾ ಎಂಬ ಅನುಮಾನ ಕಾಡುತ್ತಿದೆ. ಏಕೆಂದರೆ ಸಿ.ಸಿ. ಪಾಟೀಲರು ಬೆಳಗಾವಿ ಜಿಲ್ಲೆಯಿಂದಲೇ ರಾಜಕೀಯ ಆರಂಭಿಸಿದ್ದರು. ಆದ್ದರಿಂದ ಬೆಳಗಾವಿ ನಾಯಕರಿಗೆ ಟಿಕೆಟ್ ಕೈ ತಪ್ಪಿದಕ್ಕೆ ಎಲ್ಲೋ ಒಂದು ಕಡೆ ಅಸಮಾಧಾನಗೊಂಡಂತಿದೆ.
'ಗಣಿ ಮತ್ತು ಭೂಗರ್ಭ ಇಲಾಖೆ ಬಗ್ಗೆ ಕೇಳಿ, ಅದರ ಬಗ್ಗೆ ಸಾಕಷ್ಟು ಹೇಳ್ತಿನಿ. ಆದ್ರೆ ಇನ್ನುಳಿದಂತೆ ರಾಜಕೀಯದ ವಿಚಾರದ ಬಗ್ಗೆ ಮಾತನಾಡುವುದಿಲ್ಲ ಎಂದು ಕೈ ಮುಗಿದು ಸಭೆಯಿಂದ ಹೊರ ನಡೆದರು.