ಗದಗ: ಅದೊಂದು ಪ್ರಸಿದ್ಧ ಪ್ರವಾಸಿ ತಾಣ. ಅಲ್ಲಿ ಸಾವಿರಾರು ಗಿಡಗಳ, ಆಯುರ್ವೇದ ಗಿಡಮೂಲಿಕೆಗಳ ರಾಶಿ ಹೊಂದಿರುವ ಉದ್ಯಾನವನ ಇದೆ. ಇಲ್ಲಿಗೆ ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ಕೊಟ್ಟು ಸಸ್ಯಕಾಶಿಯನ್ನ ಆಸ್ವಾದಿಸುತ್ತಾರೆ. ಗಂಟೆಗಟ್ಟಲೆ ಉದ್ಯಾನದಲ್ಲಿ ಮನಸ್ಸು ತನ್ಮಯಗೊಳಿಸಿ ವಾಯು ವಿಹಾರ ಮಾಡ್ತಾರೆ. ಹಲವಾರು ಸಸ್ಯ ವರ್ಗಗಳನ್ನ, ಪ್ರಬೇಧಗಳನ್ನ ಅರಿತುಕೊಳ್ತಾರೆ. ಮತ್ತಷ್ಟು ಹಸಿರು ವೃದ್ಧಿಗೆ ಅರಣ್ಯ ಇಲಾಖೆ ಮುಂದಾಗಿದೆ. ಮರಗಳ ದತ್ತು ನೀಡಿ ಅರಣ್ಯದ ಹಸಿರಿನ ವೃದ್ಧಿಗೆ ಮುಂದಾಗಿದೆ.
ಹೌದು, ಅರಣ್ಯ ಇಲಾಖೆಯ ವನ್ಯಜೀವಿ ದತ್ತು ಸ್ವೀಕಾರ ಮಾದರಿಯಲ್ಲೇ ಗದಗ ಅರಣ್ಯ ಇಲಾಖೆ ರಾಜ್ಯದಲ್ಲಿಯೇ ಮೊದಲ ಬಾರಿ ಗಿಡ-ಮರಗಳ ದತ್ತು ಸ್ವೀಕಾರ ಯೋಜನೆ ಜಾರಿಗೆ ತಂದಿದೆ. ಇಲ್ಲಿ ಯಾರೇ ಆಗಲಿ ತಲಾ ಒಂದೊಂದು ಸಸಿಯನ್ನು ದತ್ತು ಪಡೆಯಬಹುದು. ಸಸಿಯೊಂದಕ್ಕೆ 500 ರೂ. ಶುಲ್ಕ ನಿಗದಿಗೊಳಿಸಲಾಗಿದೆ. ಹೀಗೆ ಪ್ರಾಯೋಜಿತ ಸಸಿಗಳನ್ನು ಬಿಂಕದಕಟ್ಟಿ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ದಾನಿಗಳ ಮೂಲಕವೇ ನೆಡಲಾಗುತ್ತಿದೆ. ಬಳಿಕ ಆ ಸಸಿಗಳ ಪೋಷಣೆ, ಪಾಲನೆ ಇಲಾಖೆಯೇ ನಿರ್ವಹಿಸಲಿದೆ.
ಕೊರೊನಾ ಲಾಕ್ಡೌನ್ ಹಿನ್ನೆಲೆ ಪ್ರಮುಖ ಪ್ರವಾಸಿ ತಾಣಗಳು ಬಾಗಿಲು ಮುಚ್ಚಿವೆ. ಇದರಿಂದ ಅರಣ್ಯ ಇಲಾಖೆ ವನ್ಯಜೀವಿ ಧಾಮ ಹಾಗೂ ಟ್ರೀ ಪಾರ್ಕ್ ಕೂಡಾ ಹೊರತಾಗಿಲ್ಲ. ಇಲಾಖೆ ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸ್ತಿದೆ. ಪರಿಣಾಮ ಸಸ್ಯೋದ್ಯಾನದ ಗುತ್ತಿಗೆ ಆಧಾರಿತ ಬಡ ಕೂಲಿ ಕಾರ್ಮಿಕರಿಗೆ ವೇತನ ಪಾವತಿಸುವುದೂ ಕಷ್ಟಕರವಾಗಿದ್ದು, ಈ ಯೋಜನೆಯಿಂದ ಅವರಿಗೆ ಸಹಕಾರಿ ಆಗಲಿದೆ ಅಂತಾರೆ ಅಧಿಕಾರಿಗಳು.
ಸುಮಾರು 200 ಎಕರೆ ಪ್ರದೇಶದಲ್ಲಿರೋ ಸಸ್ಯೋದ್ಯಾನದಲ್ಲಿ ಸಾವಿರಾರು ಗಿಡಗಳನ್ನು ಬೆಳೆಸಬಹುದಾಗಿದೆ. ದತ್ತು ಪಡೆದ ಗಿಡದ ಮುಂದೆ ದಾನಿಗಳು ಬಯಸಿದ ನಾಮಫಲಕ ಅಳವಡಿಸಲಾಗ್ತದೆ. ಜೊತೆಗೆ ಮರದ ಸಂಖ್ಯೆ, ತಳಿ ಹಾಗೂ ದಾನಿಗಳು ಹಾಕಿಸಿದ ಹೆಸರು ಒಳಗೊಂಡಿರೋ ಪ್ರಮಾಣಪತ್ರ ಸಹ ನೀಡಲಾಗುತ್ತೆ. ಮೊದಲ ಹಂತದಲ್ಲಿ ದತ್ತು ಸ್ವೀಕಾರದಡಿ ಒಂದು ಸಾವಿರ ಗಿಡಗಳನ್ನು ನೆಡಲು ಉದ್ದೇಶಿಸಿದ್ದು, ಸುಮಾರು ಐದು ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. ಅದನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿ, ಅದರಿಂದ ಬರೋ ಬಡ್ಡಿ ಹಣವನ್ನು ಕಾರ್ಮಿಕರ ವೇತನಕ್ಕೆ ಬಳಸುವುದು ಇದರ ಸದುದ್ದೇಶವಾಗಿದೆ.