ಗದಗ : ಜಿಲ್ಲೆಯ ಮುಖಂಡರು ಹಾವೇರಿ ಲೋಕಸಭೆಗೆ ಸ್ಪರ್ಧಿಸುವ ತಮ್ಮ ಅಭ್ಯರ್ಥಿಗಳ ಗೆಲುವಿನ ನಿರೀಕ್ಷೆ ಇಟ್ಕೊಂಡು ಫೇಸ್ ಟು ಫೇಸ್ ಫೈಟ್ ನಡೆಸದೆ ಫೇಸ್ಬುಕ್ನಲ್ಲಿ ಟಾಕ್-ವಾರ್ ನಡೆಸಿದ್ದಾರೆ.
ಏಲಕ್ಕಿ ನಾಡು ಎಂದೇ ಫೇಮಸ್ ಆಗಿರುವ ಹಾವೇರಿ ಲೋಕಸಭಾ ಚುನಾವಣಾ ಕಾವು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಈ ಬಾರಿ ಬಿಜೆಪಿಯ ಸಂಸದ ಶಿವಕುಮಾರ್ ಉದಾಸಿ ಎದುರಾಳಿಯಾಗಿರೋ ಕಾಂಗ್ರೇಸ್ನ ಡಿ ಆರ್ ಪಾಟೀಲ್, ಹೆಚ್ ಕೆ ಪಾಟೀಲ್ ಸಹೋದರರಾಗಿದ್ದರಿಂದ ಈ ಕಾವಿಗೆ ಮತ್ತಷ್ಟು ಪುಷ್ಟಿ ಕೊಟ್ಟಂತಾಗಿದೆ.
ಬಿಜೆಪಿ ಅಭ್ಯರ್ಥಿ ಶಿವಕುಮಾರ್ಗೆ ಸಾಮಾಜಿಕ ಜಾಲತಾಣದ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಡಿ ಆರ್ ಪಾಟೀಲ್ ಪುತ್ರ ಸಚಿನ್ ಪಾಟೀಲ್ ಸವಾಲೊಡ್ಡಿದ್ದೇ ತಡ, ಇತ್ತ ಬಿಜೆಪಿಯಿಂದ ಈ ಹಿಂದೆ ಗದಗ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ ಕೆ ಪಾಟೀಲ್ ವಿರುದ್ಧ ಸ್ಪರ್ಧೆ ಮಾಡಿ, ಸೋಲು ಕಂಡಿರುವ ಅನಿಲ್ ಮೆಣಸಿನಕಾಯಿ, ಸಚಿನ್ ಗೌಡ ಪಾಟೀಲ್ರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧವಾದ್ರು. ಸವಾಲು ಕುರಿತಾದ ವಾಗ್ದಾಳಿ ದಿನೇ ದಿನೇ ಬೆಳೆಯುತ್ತಾ ಹೋದ್ರೂ, ಈವರೆಗೂ ಇಬ್ಬರು ಸವಾಲಿಗಾಗಿ ವೇದಿಕೆಯನ್ನ ಹುಟ್ಟುಹಾಕಿಲ್ಲ. ಇನ್ನು ಮಾಧ್ಯಮಗಳ ಮುಂದೆಯಷ್ಟೇ ಹಾಕುತ್ತಿದ್ದ ಸವಾಲನ್ನ ಇದೀಗ ಫೇಸ್ಬುಕ್ವರೆಗೂ ಮುಂದುವರಿಸಿದ್ದಾರೆ.
ಇನ್ನು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ, ಸಚಿನ್ ಪಾಟೀಲ್ ಮೇಲೆ ಮಾಡಿದ ಆರೋಪಕ್ಕೆ ಕ್ಲಾರಿಫಿಕೇಷನ್ ನೀಡುವ ನೆಪದಲ್ಲಿ ಕಾಂಗ್ರೆಸ್ನ ಸಚಿನ್ ಪಾಟೀಲ್ ಮತ್ತೆ ಮೆಣಸಿನಕಾಯಿ ವಿರುದ್ಧ ಫೇಸ್ಬುಕ್ನಲ್ಲಿ ವಾಕ್ ಸಮರ ನಡೆಸಿದ್ದಾರೆ. ಅಲ್ಲದೆ ಬಹಿರಂಗವಾಗಿ ಸವಾಲು ನಡೆಯಲಿ, ಒಟ್ಟಿಗೆ ಪ್ರಚಾರವಾಗಲಿ. ಗೆಲುವು ಯಾರಿಗೆ ಅಂತಾ ನೋಡೋಣ ಎಂದಿದ್ದಾರೆ. ಮೆಣಸಿನಕಾಯಿ ಕಾಂಗ್ರೆಸ್ ಕಾರ್ಯಕರ್ತರಿಗೆ ಗೂಂಡಾಗಳು ಅಂತಾ ಕರೆಯುತ್ತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಹಾಗೆಲ್ಲ ಅಂದ್ರೆ ನಾನು ಸುಮ್ಮನಿರೋಕ್ಕಾಗಲ್ಲ. ವಾರ್ನಿಂಗ್ ಮಾಡ್ಬೇಕಾಗತ್ತೆ ಅಂತಾ ಫೇಸ್ಬುಕ್ ವಾರ್ ಮುಂದುವರೆಸಿದ್ದಾರೆ.
ಒಟ್ಟಿನಲ್ಲಿ ಈ ಇಬ್ಬರು ಮುಖಂಡರು ಹೀಗೇ ಫೇಸ್ಬುಕ್ ಯುದ್ಧ ನಡೆಸುತ್ತಿರೋ ಪರಿಣಾಮ ಗದಗ ಜಿಲ್ಲೆಯ ಜನರಲ್ಲಿ ಅಸಮಾಧಾನ ಹುಟ್ಟಿದ್ದಂತೂ ಸುಳ್ಳಲ್ಲ. ಸದ್ಯ ಚುನಾವಣೆಗಾಗಿ ಎಸೆಯೋ ಸವಾಲುಗಳು ಅಭಿವೃದ್ಧಿಗಾಗಿ ಆಗಿದ್ದರೆ, ಗದಗ ಜಿಲ್ಲೆಯಾದರೂ ಪರಿವರ್ತನೆ ಆಗ್ತಿತ್ತು ಅನ್ನೋದು ರಾಜಕೀಯ ಅನುಭವಸ್ಥರ ಮಾತಾಗಿದೆ.