ಹುಬ್ಬಳ್ಳಿ : ಸಾಲಕ್ಕೆ ಹೆದರಿ ಯುವ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನಲ್ಲಿ ನಡೆದಿದೆ. ಮೊರಬ ಗ್ರಾಮದ ಶ್ರೀನಿವಾಸ ರೆಡ್ಡಿ ಮಾಸ್ತಿ ಎಂಬುವರು ಮೃತ ರೈತ. ಈತ ಖಾಸಗಿ ಬ್ಯಾಂಕ್ನಲ್ಲಿ ₹14 ಲಕ್ಷ ಹಾಗೂ ತಂದೆಯ ಹೆಸರಲ್ಲಿ ₹50 ಸಾವಿರ ಬೆಳೆ ಸಾಲ ಮಾಡಿದ್ದರು.
ಇದನ್ನು ತೀರಿಸಲಾಗದೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಈತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಾಕ್ಟರ್ ಮನೆ ದೋಚಿ ಖದೀಮರು ಪರಾರಿ : ಹುಬ್ಬಳ್ಳಿ-ಗದಗ ರಸ್ತೆಯ ಚೇತನಾ ಕಾಲೋನಿಯಲ್ಲಿನ ಡಾ. ಬಸವರಾಜ ದೊಡ್ಡಮನಿ ಎಂಬ ವೈದ್ಯರ ಮನೆಯಲ್ಲಿ ಖದೀಮರು ಕಳ್ಳತನ ಮಾಡಿದ್ದಾರೆ. ಮನೆಯಲ್ಲಿದ್ದ ಸುಮಾರು 250 ಗ್ರಾಂ ಚಿನ್ನ, 5 ಲಕ್ಷ ರೂ. ಹಣ ಮತ್ತು ಕೆಲ ಬೆಳ್ಳಿ ಸಾಮಾನುಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಹಿಜಾಬ್ ಧರಿಸಿಯೇ ವಿಧಾನಸೌಧದಲ್ಲಿ ಕೂರುತ್ತೇನೆ, ಯಾರಿಗೆ ತಾಕತ್ತಿದೆ ತಡೆಯಲಿ : ಕಾಂಗ್ರೆಸ್ ಶಾಸಕಿ