ಹುಬ್ಬಳ್ಳಿ: ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಇದ್ದಾಗಲೇ ರೈತರ ಸಂಕಷ್ಟಕ್ಕೆ ಬಿಜೆಪಿ ಸರ್ಕಾರ ಸ್ಪಂದಿಸಿಲ್ಲ, ಇದೀಗ ನಾಯಕತ್ವ ಬದಲಾವಣೆ ನಂತರ ಈ ಸರ್ಕಾರದಿಂದ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2019ರಲ್ಲಿ ರಾಜ್ಯದಲ್ಲಿ ನೆರೆ ಬಂದಾಗ ಸಾವಿರಾರು ಕೋಟಿ ರೂಪಾಯಿ ಹಾನಿಯಾಗಿದೆ. ಜನರು ಮನೆ-ಮಠ ಕಳೆದುಕೊಂಡಿದ್ದಾರೆ. ಅಲ್ಲದೇ ನೂರಾರು ಜನ ಮೃತಪಟ್ಟಿದ್ದಾರೆ. ಆಗ ಜಾರಿ ಮಾಡಿದ ಪರಿಹಾರವೇ ಈವರೆಗೆ ಜನರಿಗೆ ಸಿಕ್ಕಿಲ್ಲ. ಎಲ್ಲಿ ಹೋದರಲ್ಲಿ ಜನರು ಪರಿಹಾರ ಸಿಕ್ಕಿಲ್ಲ ಅಂತಾ ಪರಿಹಾರಧನ ಕೇಳುತ್ತಿದ್ದಾರೆ ಎಂದರು.
ಪರಿಹಾರ ವಿಷಯದಲ್ಲಿ ರಾಜ್ಯದ 25 ಎಂಪಿಗಳು ಕೂಡಾ ಕೈಕಟ್ಟಿ ಕುಳಿತಿದ್ದಾರೆ. ಈ ಸರ್ಕಾರ ನೆರೆ, ಕೊರೊನಾ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ. ಸುಳ್ಳು ಹೇಳುವ ಬಿಜೆಪಿ ಸರ್ಕಾರ, ಜನರಿಗೆ ಅನ್ಯಾಯ ಮಾಡಿದೆ ಎಂದು ಸಿದ್ದರಾಮಯ್ಯ ಹರಿಹಾಯ್ದರು.
ಇದೇ ವೇಳೆ ಆಗಸ್ಟ್ 1 ರಂದು ತಾವೂ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ ಕೈಗೊಂಡು ನೆರೆ ಪ್ರವಾಹ ಪರಿಶೀಲನೆ ನಡೆಸುವುದಾಗಿ ಹೇಳಿದ್ರು.
ಎರಡು ದಿನಗಳ ಹಿಂದೆ ಟ್ವೀಟ್ ಮಾಡಿದ್ದ ರಾಜ್ಯ ಖಾತೆ ಸಚಿವ ಶೋಭಾ ಕರಂದ್ಲಾಜೆ ಕರ್ನಾಟಕಕ್ಕೆ ನೆರೆ ಪರಿಹಾರವಾಗಿ ಕೇಂದ್ರದಿಂದ ಕರ್ನಾಟಕಕ್ಕೆ 629 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದರು.