ಧಾರವಾಡ: ಲಾಕ್ ಡೌನ್ ಆರಂಭವಾದಾಗಿನಿಂದ ನಿರ್ಗತಿಕರು , ದಿನದ ಕೂಲಿಯನ್ನೇ ನಂಬಿ ಬದುಕುತ್ತಿದ್ದ ಜನರು ಬಹಳ ಕಷ್ಟ ಅನುಭವಿಸುತ್ತಿದ್ದಾರೆ. ಇಂತವರಿಗೆ ಕೆಲವು ಸಂಘಸಂಸ್ಥೆಗಳು, ಸ್ವಯಂ ಸೇವಕರು ಮುಂದೆ ಬಂದು ಉಚಿತವಾಗಿ ಆಹಾರ ನೀಡುತ್ತಿದ್ದಾರೆ.
ಆದರೆ ಲಾಕ್ ಡೌನ್ನಿಂದ ಮನುಷ್ಯರು ಮಾತ್ರವಲ್ಲ ಪ್ರಾಣಿ ಪಕ್ಷಿಗಳು ಕೂಡಾ ಊಟ ಇಲ್ಲದೆ ಕಷ್ಟ ಅನುಭವಿಸುತ್ತಿವೆ. ಈ ಹಿನ್ನೆಲೆ ಹುಬ್ಬಳ್ಳಿ-ಧಾರವಾಡದ ಪೀಪಲ್ಸ್ ಫಾರ್ ಎನಿಮಲ್ಸ್ ಸಂಸ್ಥೆ ಸದಸ್ಯರು ಅಡುಗೆ ತಯಾರಿಸಿ ಬೀದಿ ಬದಿಯ ಪ್ರಾಣಿಗಳಿಗೆ ಕೊಡುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆಯ ಅಧ್ಯಕ್ಷೆ ಡಾ. ಪೂರ್ಣಿಮಾ ಹಾಗೂ ಉಪಾಧ್ಯಕ್ಷ ತೇಜರಾಜ ಜೈನ್ ಅವರ ಮಾರ್ಗದರ್ಶನದಲ್ಲಿ ಸ್ವಯಂ ಸೇವಕರು ಪ್ರಾಣಿಗಳ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಮೊಟ್ಟೆ, ಬಿಸ್ಕೆಟ್, ಅನ್ನ ತಯಾರಿಸಿ ಬೀದಿ ಬದಿಯ ಪ್ರಾಣಿಗಳಿಗೆ ವಿತರಿಸುತ್ತಿದ್ದಾರೆ. ಸದಸ್ಯರು ದನಕರುಗಳಿಗೆ ನೀರು ಹಾಗೂ ಮೇವನ್ನೂ ಕೂಡಾ ವಿತರಿಸುತ್ತಿದ್ಧಾರೆ.