ಹುಬ್ಬಳ್ಳಿ : ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಗರದ ರೈಲ್ವೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಯೋಗ ಶಿಬಿರದ ಸಮಾರಂಭಕ್ಕೆ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಯೋಗದಿಂದ ರೋಗ ಮುಕ್ತವಾಗಿ ಜೀವನ ನಡೆಸಬಹುದು. ಯೋಗ ಆರೋಗ್ಯಯುತ ಬದುಕಿಗೆ ಸೋಪಾನ. ಪ್ರಸ್ತುತ ದಿನಮಾನಗಳಲ್ಲಿ ಜನರು ಕೆಲಸದ ಒತ್ತಡದಲ್ಲಿ ಯಾವುದೇ ವ್ಯಾಯಾಮ ಹಾಗೂ ಯೋಗಾಸನಗಳನ್ನು ಮಾಡುವುದಿಲ್ಲ. ಇದರಿಂದ ದಿನವಿಡಿ ಒತ್ತಡ ಹಾಗೂ ದೈಹಿಕ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಇದೆಲ್ಲ ಒತ್ತಡಗಳಿಂದ ಮುಕ್ತಿ ಪಡೆಯಲು ಯೋಗ ಸೂಕ್ತ ಮಾರ್ಗವಾಗಿದೆ ಎಂದು ಹೇಳಿದರು.
ಕಳೆದ ಎರಡು ತಿಂಗಳ ಅವಧಿಯಲ್ಲಿ ಹು-ಧಾ ಮಹಾನಗರದಲ್ಲಿ ಶಿಬಿರಗಳನ್ನು ನಡೆಸಿ ಸುಮಾರು 250 ಯೋಗ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಜನರು ಬರುತ್ತಿದ್ದಾರೆ. ಇಂತಹ ಕಾರ್ಯವನ್ನು ಮಾಡುತ್ತಿರುವ ಪತಂಜಲಿ ಯೋಗ ಶಿಕ್ಷಣ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಭವರಲಾಲ್ ಆರ್ಯ, ಸಂಜಯ ಕುಸ್ತಿಗಾರ, ಮಹಿಳಾ ಘಟಕದ ಉತ್ತರ ಕರ್ನಾಟಕ ಪ್ರಭಾರಿ ಆರತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.