ಧಾರವಾಡ: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದವಿಲ್ಲದೆ ಸಾಮರಸ್ಯ ಇರಬೇಕು ಎಂದರೆ ಎರಡೂ ಕಡೆ ಸಾಹಿತಿಗಳೇ ಅಧಿಕಾರಕ್ಕೆ ಬಂದುಬಿಡಬೇಕು ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬೇಂದ್ರೆ ಭವನದಲ್ಲಿ ಆಯೋಜಿಸಿದ್ದ ಡಾ. ದ.ರಾ. ಬೇಂದ್ರೆ 125ನೇ ಜನ್ಮದಿನಾಚರಣೆ ಹಾಗೂ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಾಷೆ, ಭೌಗೋಳಿಕತೆ ಹೆಸರಿನಲ್ಲಿ ತಗಾದೆಯಲ್ಲೇ ನಾವು ಇದ್ದೇವೆ. ಗಡಿ ವ್ಯಾಜ್ಯ ತೀರ್ಮಾನ ಮಾಡಲು ವಿಶೇಷ ಆಯೋಗವೇ ಇದೆ. ಬೇಂದ್ರೆಯವರ ಮನೆ ಭಾಷೆ, ಮನೆಯಂಗಳದ ಭಾಷೆ ಬೇರೆ ಬೇರೆಯಾಗಿತ್ತು.
ಭಾಷೆ ಬಗ್ಗೆ ಯಾಕಿಷ್ಟು ನಮ್ಮ ನಮ್ಮ ಮಧ್ಯೆ ಈ ಸಂಘರ್ಷ. ಭಾಷಾವಾರು ಪ್ರಾಂತ್ಯ ರಚನೆ ಆದ ಮೇಲೂ ನಾವು ಭಾಷೆಗಳ ಮೇಲೆ ಸಂಘರ್ಷ ಮಾಡುತ್ತಿದ್ದೇವೆ ಎಂದರು. ಸಮಾರಂಭದಲ್ಲಿ ಕವಿ, ನಾಟಕಕಾರ, ಅಂಕಣಕಾರ, ಅನುವಾದಕ ಪ್ರೊ. ಹೆಚ್.ಎಸ್.ಶಿವಪ್ರಕಾಶ್ಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.