ಹುಬ್ಬಳ್ಳಿ: ಉಣಕಲ್ ಕೆರೆಯನ್ನು ಶ್ರೀ ಚನ್ನಬಸವ ಸಾಗರ ಎಂದು ನಾಮಕರಣ ಮಾಡಿ ಅಲ್ಲಿ ಬೃಹತ್ತಾದ ಶ್ರೀ ಚನ್ನಬಸವೇಶ್ವರ ಮೂರ್ತಿ ಸ್ಥಾಪಿಸಬೇಕು. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಎದುರುಗಡೆ ಇರುವ ಶ್ರೀ ವಿವೇಕಾನಂದರ ಮೂರ್ತಿ ತೆರವುಗೊಳಿಸಿ ರೈಲ್ವೆ ನಿಲ್ದಾಣ ಹೆಸರಿನಂತೆ ಬೃಹತ್ತಾದ ಶ್ರೀ ಸಿದ್ದಾರೂಢರ ಮೂರ್ತಿಯನ್ನು ಸ್ಥಾಪಿಸಬೇಕೆಂದು ಉತ್ತರ ಜನಶಕ್ತಿ ಸೇನಾ ಪಕ್ಷದ ಅಧ್ಯಕ್ಷ ಎಸ್.ಎಸ್.ಶಂಕರಣ್ಣ ಆಗ್ರಹಿಸಿದ್ದಾರೆ.
ಉತ್ತರ ಕರ್ನಾಟಕದ ಕೇಂದ್ರ ಬಿಂದು ಹುಬ್ಬಳ್ಳಿಯಲ್ಲೇ ಇಲ್ಲಿನ ಸ್ಥಳೀಯ ಜನರ ಸ್ವಾಭಿಮಾನಕ್ಕೆ ಅವರು ಪೂಜಿಸುವ ಶರಣ ಸಂತರಿಗೆ, ಅವರು ಆರಾಧಿಸುವ ಹುಬ್ಬಳ್ಳಿಯ ಹೆಮ್ಮೆಯ ಹಿರಿಯ ಧೀಮಂತ ನಾಯಕರಿಗೆ ಆಡಳಿತ ಸರ್ಕಾರದಿಂದ ಅವಮಾನವಾಗಿದೆ. ಅಲ್ಲದೇ ಜನಮನದಿಂದ ಆ ಮಹನೀಯರನ್ನು ಮರೆಮಾಚಿ ಉತ್ತರ ಭಾರತದ ಹಿರಿಯರನ್ನು ಸ್ಥಾಪಿಸುವ ಹುನ್ನಾರ ಆಡಳಿತ ಸರ್ಕಾರದ್ದಾಗಿದೆ ಎಂದು ಆರೋಪಿಸಿದರು.
ನಮ್ಮ ಮನೆಯಲ್ಲಿ ನಮ್ಮ ಹಿರಿಯರ ಫೋಟೋ ಇಟ್ಟು ಪೂಜಿಸದೇ, ಪಕ್ಕದ ಮನೆಯ ಹಿರಿಯರ ಇಟ್ಟು ಪೂಜಿಸಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದ ಅವರು, ಕೂಡಲೇ ಸ್ಥಳೀಯ ಜನರ ಭಾವನೆಗಳಿಗೆ ಗೌರವ ಕೊಟ್ಟು ಸ್ಟೇಷನ್ ರೋಡ್ನಲ್ಲಿ ಬೃಹತ್ತಾದ ಸರದಾರ ಮೆಹಬೂಬ್ ಅಲಿಖಾನ್ ರಸ್ತೆಯ ನಾಮಫಲಕ ಅಳವಡಿಸಬೇಕು. ಹೊಸೂರು ಸರ್ಕಲ್ ಅನ್ನು ಈಗಾಗಲೇ ಸಂಗೊಳ್ಳಿ ರಾಯಣ್ಣ ಸರ್ಕಲ್ ಎಂದು ನಾಮಫಲಕ ಇಟ್ಟಿದ್ದು, ಅಲ್ಲಿ ಬೃಹತ್ತಾದ ವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪಿಸಿ ನಮ್ಮ ಮಹನೀಯ, ಹಿರಿಯರಿಗೆ ಆದ ಅನ್ಯಾಯ ಸರಿ ಪಡಿಸಬೇಕೆಂದು ಆಗ್ರಹಿಸಿದರು.