ಧಾರವಾಡ: ಚಿತ್ರದುರ್ಗದ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠ ಹಾಗೂ ಬಸವ ಕೇಂದ್ರಗಳು ಮತ್ತು ಬಸವ ಸಂಘಟನೆಗಳು ವಿವಿಧ ಧಾರ್ಮಿಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಫೆ. 16 ರಂದು ಬೆಂಗಳೂರಿನಲ್ಲಿ ಶಿವಯೋಗ ಸಂಭ್ರಮ ಅಸಂಖ್ಯ ಪ್ರಮಥರ ಗಣಮೇಳ ಹಾಗೂ ಸರ್ವ ಶರಣರ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದುರ್ಗದ ಬೃಹನ್ಮಠದ ಪೀಠಾಧ್ಯಕ್ಷ ಶ್ರೀ ಡಾ.ಶಿವಮೂರ್ತಿ ಮುರಘಾ ಶರಣರು ತಿಳಿಸಿದರು.
ಧಾರವಾಡದ ಮುರುಘಾಮಠದಲ್ಲಿ ಸಮಾವೇಶದ ಕರಪತ್ರ ಹಾಗೂ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬಸವಣ್ಣನವರ ನೇತೃತ್ವದಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗಣಂಗಳು ಸಮಾವೇಶ ಗೊಂಡಿದ್ದರೆಂಬುದು ಒಂದು ಇತಿಹಾಸ. 21ನೇ ಶತಮಾನದಲ್ಲಿ ಅಂತಹ ಒಂದು ಚಾರಿತ್ರಿಕ ಘಟನೆಗೆ ಸಾಕ್ಷಿ ಆಗಬೇಕು ಎಂಬ ಉದ್ದೇಶದಿಂದ ಫೆಬ್ರವರಿ 16 ರಂದು ಬೆಳಗ್ಗೆ 8ಕ್ಕೆ ಶಿವಯೋಗ ಸಂಭ್ರಮ ಎಂಬ ಧ್ಯಾನ ಪರಂಪರೆಯನ್ನು ಸಾಕ್ಷಿಕರಿಸಬೇಕಿದೆ. ಅದೇ ದಿನ ಬೆಳಗ್ಗೆ 11ಕ್ಕೆ ನಡೆಯುವ ಅಸಂಖ್ಯ ಪ್ರಮಥರ ಗಣಮೇಳದ ಮೂಲಕ ಅಸಂಖ್ಯಾತರು ಸೇರುವುದರೊಂದಿಗೆ ಹೊಸ ಇತಿಹಾಸ ನಿರ್ಮಾಣ ಮಾಡಬೇಕಿದೆ ಎಂದರು.
ಈ ಸಮಾರಂಭದಲ್ಲಿ ರಾಜ್ಯ-ರಾಷ್ಟ್ರ ಮಟ್ಟದ ಧಾರ್ಮಿಕ ಮುಖಂಡರು, ಸಂತರು, ಸರ್ವ ಜನಾಂಗದ ಸ್ವಾಮಿಗಳು ಹಾಗೂ ಶಾಖಾಮಠಗಳು, ಜನನಾಯಕರು, ಚಿಂತಕರು ಮತ್ತು ಕಲಾವಿದರು ಭಾಗವಹಿಸಲಿದ್ದಾರೆ ಎಂದ ಅವರು, ಸಮ್ಮೇಳನದಲ್ಲಿ ಮಾತನಾಡುವಾಗ ವಿಷಯಕ್ಕೆ ಅನುಗುಣವಾಗಿ ಮಾತನಾಡಬೇಕು. ಇದು ರಾಜಕೀಯ ಪ್ರೇರಿತ ಅಲ್ಲ ಧಾರ್ಮಿಕ ಕಾರ್ಯಕ್ರಮವಾಗಲಿದೆ ಎಂಬ ಇಂಗಿತ ವ್ಯಕ್ತಪಡಿಸಿದರು.