ಹುಬ್ಬಳ್ಳಿ: ಕೊರೊನಾ ಇಡೀ ಮಾನವ ಕುಲವನ್ನೇ ತಲ್ಲಣಗೊಳಿಸಿದೆ. ಯುವಕ-ಯುವತಿಯರು ಕೆಲಸವಿಲ್ಲದೆ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯತ್ತ ಮುಖಮಾಡುತ್ತಿದ್ದಾರೆ. ಜೊತೆಗೆ ಸೋಂಕು ತಗುಲಿ ನಾನು ಸತ್ತರೆ ನನ್ನ ಕುಟುಂಬದ ಗತಿಯೇನು? ಎರಡು ದಿನಗಳಿಂದ ನೆಗಡಿಯಾಗಿದ್ದು, ಭಯವಾಗುತ್ತಿದೆ. ನನಗೂ ಕೊರೊನಾ ಬಂದಿರಬಹುದು? ಕೊರೊನಾ ಬಂದರೆ ಸಾವೇ ಪರಿಹಾರ ಎಂದು ಕೆಲವರು ಅಂದುಕೊಳ್ಳುವ ಮಟ್ಟಕ್ಕೆ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ.
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸೋಂಕಿತರನ್ನು ಸಮಾಜದಲ್ಲಿ ಮನುಷ್ಯರಂತೆ ಕಾಣಬೇಕಿದೆ ಎಂದು ಸರ್ಕಾರ ಮನವಿ ಮಾಡಿಕೊಳ್ಳುತ್ತಿದೆ. ಆದರೂ ಸೋಂಕಿತರನ್ನು ಕೀಳಾಗಿ, ಅಸ್ಪೃಶ್ಯ, ಅಪರಾಧಿಗಳಂತೆ ನೋಡಲಾಗುತ್ತಿದೆ. ಇದರಿಂದ ಅವರು ಮಾನಸಿಕ ಖಿನ್ನತೆ, ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ, ಸಮಾಜ ಪೀಡಿತರನ್ನು ನೋಡುವ ಪರಿ ಬದಲಾಗಬೇಕಿದೆ ಎಂದು ಮಾನಸಿಕ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.
ಖಿನ್ನತೆ ಹಾಗೂ ತೊಳಲಾಟಕ್ಕೆ ಒಳಗಾದವರ ಸಮಸ್ಯೆ ಪರಿಹಾರಕ್ಕೆ ನಿಮ್ಹಾನ್ಸ್ನ 8 ಲ್ಯಾಂಡ್ ಲೈನ್ ಹಾಗೂ ಹುಬ್ಬಳ್ಳಿ ಕಿಮ್ಸ್ ಮಾನಸಿಕ ರೋಗಿಗಳ ವಿಭಾಗದ ಒಂದು ಸಹಾಯವಾಣಿ ಕೇಂದ್ರದ ಮೂಲಕ ಪ್ರತಿ ದಿನ ಸೋಂಕಿತರಿಗೆ ಕರೆ ಮಾಡಿ ಆತ್ಮಸ್ಥೈರ್ಯ ಹಾಗೂ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ಈವರೆಗೂ ಸಹಾಯವಾಣಿಯಿಂದ 2 ಸಾವಿರ ಮಂದಿಗೆ ಕರೆಮಾಡಿ ಧೈರ್ಯ ತುಂಬಲಾಗಿದೆ.
ನಿದ್ರಾಹೀನತೆ, ಆತಂಕ, ಮನಸ್ಸಿನಲ್ಲಿ ಬೇಸರ ತೋಡಿಕೊಳ್ಳುವವರಿಗೆ ಸಾಂತ್ವನ ಹೇಳಲಾಗುತ್ತಿದೆ. ಕೆಲವರ ಸಮಸ್ಯೆಗೆ ವೈಜ್ಞಾನಿಕ ಮಾಹಿತಿ ನೀಡಿ ಧೈರ್ಯ ತುಂಬಲಾಗುತ್ತಿದೆ. ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದವರಿಗೆ ಆಸ್ಪತ್ರೆಗೆ ಕರೆಸಿ ಚಿಕಿತ್ಸೆ ನೀಡಲಾಗುತ್ತಿದೆ. ಫೋನ್ ಹಾಗೂ ವಿಡಿಯೋ ಕಾಲ್ ಮೂಲಕ ಸಮಾಲೋಚನೆ ನಡೆಸಿ ಪರಿಹಾರ ನೀಡಲಾಗುತ್ತಿದೆ.