ಧಾರವಾಡ: ಅಯೋಧ್ಯೆಯ ರಾಮಮಂದಿರ ಸ್ಥಳವು ಬುದ್ಧನಿಗೆ ಸೇರಿದ್ದು ಎಂದು ಅಂಬೇಡ್ಕರ್ ಹಿತಾಭಿವೃದ್ಧಿ ಸಂಘ ಹೇಳಿದೆ. ಅಲ್ಲದೆ, ಆ ಸ್ಥಳದಲ್ಲಿ ಬುದ್ಧ ವಿಹಾರ ನಿರ್ಮಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅಂಬೇಡ್ಕರ್ ಲಿಡ್ಕರ್ ಹಿತಾಭಿವೃದ್ಧಿ ಸಂಘಟನೆ ಕಾರ್ಯಕರ್ತರು ಅಯೋಧ್ಯೆ ಸ್ಥಳವು ರಾಮ ಮತ್ತು ಬಾಬರ್ ಇಬ್ಬರಿಗೂ ಸೇರಿದ್ದಲ್ಲ, ಅದು ಬುದ್ಧನ ವಿಹಾರಕ್ಕೆ ಸೇರಿದೆ. ಅಲ್ಲದೆ ಅಲ್ಲಿ ಬುದ್ಧನ ವಿಗ್ರಹಗಳು ಸಹ ಸಿಕ್ಕಿದ್ದು, ಆ ಜಾಗವನ್ನ ಬೌದ್ಧರಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವ ಸಂದರ್ಭದಲ್ಲಿ ಅಲ್ಲಿ ಬುದ್ಧನ ಮೂರ್ತಿ ಪತ್ತೆಯಾಗಿದೆ. ಈ ಸಂಬಂಧ ಭಾರತ ಸರ್ಕಾರದ ಅಧೀನದಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಅಧಿಕಾರಿಗಳು ಸೂಕ್ತ ದಾಖಲೆ ಒದಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಹಾಗೂ ಬಾಬ್ರಿ ಮಸೀದಿ ಕಟ್ಟದೇ ಆ ಸ್ಥಳವನ್ನು ಬೌದ್ಧ ವಿಹಾರ ಕಟ್ಟುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.