ಹುಬ್ಬಳ್ಳಿ: ನಗರದಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿದ್ದು ಕಳೆದ ರಾತ್ರಿ ಜಿಲ್ಲಾಧಿಕಾರಿ, ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಹಾಗೂ ತಹಶೀಲ್ದಾರ ಸಂತೋಷ ಬಿರಾದಾರ ಸಿಟಿ ರೌಂಡ್ಸ್ ಮಾಡಿದರು.
ನೈಟ್ ಕರ್ಫ್ಯೂ ಅತ್ಯಂತ ಪರಿಣಾಮಕಾರಿಯಾಗಿ ಜಾರಿಯಾಗಿದೆ. ರಾತ್ರಿ 9 ಗಂಟೆಯೊಳಗೆ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿವೆ. ಜನರು ಸ್ವಯಂಪ್ರೇರಣೆಯಿಂದ ನೈಟ್ ಕರ್ಫ್ಯೂಗೆ ಸ್ಪಂದಿಸಿದ್ದಾರೆ. ವೀಕೆಂಡ್ ಕರ್ಫ್ಯೂ ಸಹ ಪರಿಣಾಮಕಾರಿಯಾಗಿ ಜಾರಿ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಹೇಳಿದರು.
ಪೊಲೀಸ್ ಆಯುಕ್ತ ಲಾಬೂರಾಮ್ ಮಾತನಾಡಿ, ಸರ್ಕಾರದ ಆದೇಶ ಎಲ್ಲರಿಗೂ ಅನ್ವಯಿಸುತ್ತದೆ. ಇದನ್ನು ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವದೆಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಚಾಮರಾಜನಗರದಲ್ಲಿ ನೈಟ್ ಕರ್ಫ್ಯೂ; ಅಂಗಡಿ ಬಂದ್ ಮಾಡದವರಿಗೆ ಡಿಸಿ, ಎಸ್ಪಿ ತರಾಟೆ
ನಗರದ ವಿವಿಧ ಬಡಾವಣೆಗಳಿಗೆ ಹಾಗೂ ಸೂಪರ್ ಮಾರ್ಕೆಟ್, ಸುಭಾಶ್ ರಸ್ತೆ, ಲೈನ್ ಬಜಾರ, ಟಿಕಾರೆ ರಸ್ತೆ, ಶಿವಾಜಿ ಸರ್ಕಲ್ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ನಂತರ ನರೇಂದ್ರ ಕ್ರಾಸ್ವರೆಗೆ ಸಂಚರಿಸಿ, 9 ಗಂಟೆಯ ನಂತರವು ಮಾವಿನ ಹಣ್ಣಿನ ಅಂಗಡಿ ತೆರೆದಿದ್ದ ಅಂಗಡಿ ಮಾಲೀಕನಿಗೆ ದಂಡ ವಿಧಿಸಿ, ತಕ್ಷಣ ಬಂದ್ ಮಾಡಿಸಿದರು.
ಈ ವೇಳೆ ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.