ಹುಬ್ಬಳ್ಳಿ: ಸೆಸ್ ಸಂಗ್ರಹ ಕೈಬಿಡುವಂತೆ ಆಗ್ರಹಿಸಿ ಇಂದಿನಿಂದ ರಾಜ್ಯದಾದ್ಯಂತ ಎಪಿಎಂಸಿ ಬಂದ್ ಮಾಡಿ ಎಪಿಎಂಸಿ ವರ್ತಕರು ಅನಿರ್ಧಿಷ್ಟಾವಧಿ ಹೋರಾಟ ಆರಂಭಿಸಿದ್ದಾರೆ.
ರಾಜ್ಯದ 162 ಎಪಿಎಂಸಿ ಬಂದ್ ಮಾಡಿ ಹೋರಾಟ ಆರಂಭಿಸಿದ್ದರಿಂದ ಏಷ್ಯಾದ ಎರಡನೇ ಅತಿ ದೊಡ್ಡ ಎಪಿಎಂಸಿ ಮಾರುಕಟ್ಟೆ ಕೂಡ ಸಂಪೂರ್ಣ ಸ್ತಬ್ಧವಾಗಿದೆ. ಹುಬ್ಬಳ್ಳಿಯ ಅಮರಗೋಳದಲ್ಲಿರುವ ಜಗಜ್ಯೋತಿ ಬಸವೇಶ್ವರ ಎಪಿಎಂಸಿ ಮಾರುಕಟ್ಟೆಯ ಎಲ್ಲಾ ಅಂಗಡಿಗಳು ಬಾಗಿಲು ಮುಚ್ಚಿವೆ. ಇದರಿಂದ ಹುಬ್ಬಳ್ಳಿ ಎಪಿಎಂಸಿ ಖಾಲಿ ಖಾಲಿ ಹೊಡೆಯುತ್ತಿದೆ.
ರೈತರು, ವರ್ತಕರು, ಕಾರ್ಮಿಕರಿಲ್ಲದೆ ಎಪಿಎಂಸಿ ಬಿಕೋ ಎನ್ನುತ್ತಿದೆ. ಈರುಳ್ಳಿ, ಶೇಂಗಾ, ಆಲೂಗಡ್ಡೆ, ಕಾಳು ವ್ಯಾಪಾರಸ್ಥರು ಸೇರಿದಂತೆ ಹೋಲ್ ಸೇಲ್ ವ್ಯಾಪಾರಸ್ಥರು ಬೆಂಬಲ ಸೂಚಿಸಿದ್ದಾರೆ.
ಎಪಿಎಂಸಿ ಒಳಗಡೆ ವ್ಯಾಪಾರ ವಹಿವಾಟು ನಡೆಸಿದ್ರೆ ಶೇ. 1ರಷ್ಟು ಸೆಸ್ ಸಂಗ್ರಹ ಮಾಡಲಾಗುತ್ತಿದೆ. ಎಪಿಎಂಸಿ ಹೊರಗಡೆ ನಡೆಯುವ ವ್ಯಾಪಾರ ವಹಿವಾಟಿಗೆ ಸೆಸ್ ಸಂಗ್ರಹ ಮಾಡುತ್ತಿಲ್ಲ. ಈ ತಾರತಮ್ಯ ಸರಿಪಡಿಸುವಂತೆ ವರ್ತಕರು ಆಗ್ರಹಿಸುತ್ತಿದ್ದಾರೆ.