ಧಾರವಾಡ: ಇವತ್ತು ಮತ್ತು ನಾಳೆ ಉತ್ತರ ಕರ್ನಾಟಕ ಭಾಗದಲ್ಲಿ ಓಡಾಡಲಿದ್ದೇನೆ. ನಮ್ಮ ಪಕ್ಷದ ವರಿಷ್ಠರು ನಿನ್ನೆ ಸಂತ್ರಸ್ತರ ನೆರವಿಗೆ ಧಾವಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ನಾವು ಬಂದಿದ್ದೇವೆ ಎಂದು ನಟ ಹಾಗೂ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಹೊಳೆ ಆಲೂರಿನ ಸಂತ್ರಸ್ತ ಅಂಧ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ದಕ್ಷಿಣ ಮತ್ತು ಉತ್ತರ ಕರ್ನಾಟಕ ಬೇರೆಯಲ್ಲ. ನಮ್ಮ ಕಡೆಯಿಂದ ವೈಯಕ್ತಿಕ ಸಹಾಯ ಮಾಡಲು ಪ್ರಯತ್ನ ಪಡುತ್ತಿದ್ದೇವೆ. ನಮ್ಮ ಕರ್ತವ್ಯ ನಾವು ನಿರ್ವಹಿಸುತ್ತಿದ್ದೇವೆ ಎಂದರು.
ಮುಂದೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜನರ ಪರವಾಗಿ ನಿಲ್ಲುತ್ತಾರೆಂಬ ಭರವಸೆ ಇದೆ. ಇವತ್ತು ಮಂತ್ರಿಮಂಡಲ ಇನ್ನೂ ರಚನೆಯಾಗಿಲ್ಲ. ಮುಖ್ಯಮಂತ್ರಿ ಒಬ್ಬರೇ ಓಡಾಡ್ತಿದ್ದಾರೆ ಪಾಪ ಎಂದು ಕನಿಕರ ವ್ಯಕ್ತಪಡಿಸಿದರು. ರಾಷ್ಟ್ರೀಯ ವಿಪತ್ತು ಘೋಷಣೆ ವಿಳಂಬ ವಿಚಾರಕ್ಕೆ ಮಾತನಾಡಿದ ಅವರು, ಇವತ್ತು ಜನ ಸಂಕಷ್ಟದಲ್ಲಿದ್ದಾಗ ಯಾರೇ ಮಂತ್ರಿ ಇದ್ದರೂ ತಮ್ಮ ಧರ್ಮ ಪಾಲಿಸಬೇಕು. ಕೇಂದ್ರ ಸರ್ಕಾರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಆ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹುಸಿ ಮಾಡೋದಿಲ್ಲ ಅಂತಾ ಅಂದುಕೊಂಡಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.