ಹುಬ್ಬಳ್ಳಿ: ತನಗೆ ಎಂಥದ್ದೇ ಕಷ್ಟ ಬಂದರೂ ಕೂಡಾ ತನ್ನ ಮಗುವಿಗೆ ಪ್ರೀತಿ, ಮಮತೆಯಲ್ಲಿ ತಾಯಿಯಾದವಳು ಯಾವುದೇ ಕೊರತೆ ಉಂಟು ಮಾಡಲಾರಳು. ಮಗುವಿನ ಆರೈಕೆಗಾಗಿ ತನ್ನೆಲ್ಲ ಆಸೆ, ಆಕಾಂಕ್ಷೆಗಳನ್ನು ಬದಿಗಿಟ್ಟು ಆಕೆ ಬದುಕುತ್ತಾಳೆ. ಇಂಥದ್ದೇ ಒಂದು ಕಹಾನಿ ಇಲ್ಲಿದೆ ನೋಡಿ.
ಕಳೆದ 18 ವರ್ಷಗಳ ಹಿಂದೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಡೆದ ಗೋಲಿಬಾರ್ ಟಿಪ್ಪುನಗರದ ನಿವಾಸಿ ಹೇಮಾ ಮೆಹರವಾಡೆಯವರ ಬದುಕನ್ನೇ ನರಕ ಮಾಡಿತ್ತು. 2001 ರಂದು ಅಶೋಕ್ ಸಿಂಘಾಲ್ ರಥ ಯಾತ್ರೆ ವೇಳೆ ನಡೆದ ಗಲಭೆ ಲಾಠಿ ಚಾರ್ಜ್ ಮತ್ತು ಗೋಲಿಬಾರ್ ಗೆ ಕಾರಣವಾಗಿ ಹೇಮಾರ ಪತಿ ಅಂಬಾಬಾಲ ಮೃತಪಟ್ಟಿದ್ದರು. ಕಾರ್ಯಕ್ರಮದಲ್ಲಿ ಕಡಲೆಕಾಯಿ ವ್ಯಾಪಾರ ಮಾಡಲು ಹೋಗಿದ್ದ ಅಂಬಾಬಾಲ್ ಗುಂಡು ತಗುಲಿತ್ತು.
ಗೋಲಿಬಾರ್ ಸಂದರ್ಭದಲ್ಲಿ ಹೇಮಾ ಅವರು ತುಂಬು ಗರ್ಭಿಣಿಯಾಗಿದ್ದರು. ಹೆರಿಗೆ ನೋವು ಒಂದೆಡೆಯಾದರೆ ಇನ್ನೊಂದು ಕಡೆ ಪತಿಯ ಸಾವಿನ ನೋವು. ಈ ದುಃಖದಲ್ಲೇ ಅವರು ಗಂಡುಮಗುವಿಗೆ ಜನ್ಮ ನೀಡ್ತಾರೆ. ಗಲಭೆಯ ಘಟನೆಯ ನೋವಿನಿಂದಾಚೆ ಬರಲಾಗದೇ ಮಾನಸಿಕವಾಗಿ ಕುಗ್ಗಿಹೋಗಿದ್ದ ಹೇಮಾ ಅವರಿಗೆ ದಿವ್ಯಾಂಗ ಗಂಡು ಮಗು ಜನಿಸಿತು. ಹಲವು ವರ್ಷಗಳಿಂದ ತನ್ನ ಈ ಮಗನನ್ನು ಸಾಕಲು ಹರಸಾಹಸ ಪಡ್ತಿದ್ದಾರೆ. ಮಗನಿಗೆ ಬರುವ 1,200 ರೂ ಮಾಸಿಕ ಪಿಂಚಣಿಯಲ್ಲಿಯೇ ಇವರು ಜೀವನ ಸಾಗಿಸುತ್ತಿದ್ದಾರೆ.
ಕಿತ್ತು ತಿನ್ನುವ ಬಡತನವಿದ್ದರೂ ಮಗುವಿನ ಪಾಲನೆಯಲ್ಲಿ ತಾಯಿ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ. 18 ವರ್ಷಗಳಿಂದ ಮಗನ ಸೇವೆ ಮಾಡುತ್ತಿರುವ ಈ ತಾಯಿ ಯಾರ ಸಹಾಯವಿಲ್ಲದೆ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ವಿಶ್ವ ತಾಯಂದಿರ ದಿನದ ಪ್ರಯುಕ್ತ ಈ ಸಹೃದಯಿ ತಾಯಿಗೆ ನಮ್ಮದೊಂದು ನಮನ.