ಧಾರವಾಡ: ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಮಹಿಳಾ ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ನಡೆಯಿತು.
ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ಆಯೋಜಿಸಿದ್ದ 22ನೇ ತಂಡದ ಹಾಗೂ ಎರಡನೇ ಕಾರಾಗೃಹ ಮಹಿಳಾ ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ನಡೆಯಿತು. ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ ಸೇರಿದಂತೆ ಅನೇಕರು ಈ ಕವಾಯತ್ತಿಗೆ ಸಾಕ್ಷಿಯಾದರು.
ಬಳಿಕ ಮಾತನಾಡಿದ ಉತ್ತರ ವಲಯ ಪೊಲೀಸ್ ಮಹಾ ನಿರೀಕ್ಷಕ ರಾಘವೇಂದ್ರ ಸುಹಾಸ್, ಪೊಲೀಸ್ ಹಾಗೂ ಕಾರಾಗೃಹ ಇಲಾಖೆಗೆ ಸೇರುವ ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ಷಮತೆ, ಬದ್ಧತೆಯಿಂದ ಕರ್ತವ್ಯ ನಿರ್ವಹಿಸಿ, ವೃತ್ತಿಪರತೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಡಿಎಆರ್ ವಿಭಾಗದ ಡಿವೈಎಸ್ಪಿ ಹಾಗೂ ಉಪ ಪ್ರಾಂಶುಪಾಲ ಜಿ.ಸಿ. ಶಿವಾನಂದ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ವಾರ್ಷಿಕ ವರದಿ ಮಂಡಿಸಿದರು.
ವಿವಿಧ ಕ್ರೀಡಾ ವಿಜೇತ ಮಹಿಳಾ ಪ್ರಶಿಕ್ಷಣಾರ್ಥಿಗಳಗೆ ಬಹುಮಾನ ವಿತರಣೆ: ಒಳಾಂಗಣ ಕ್ರೀಡಾ ವಿಭಾಗದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಅನಿತಾ ಎಸ್.ಕೆ, ವಿಜಯಪುರ ಜಿಲ್ಲೆಯ ಶೃತಿ ಪಾಟೀಲ, ಉತ್ತರ ಕನ್ನಡ ಜಿಲ್ಲೆಯ ಲಾವಣ್ಯಾ ನಾಯಕ ಹಾಗೂ ಬೆಳಗಾವಿ ಜಿಲ್ಲೆಯ ಗೀತಾ ಚಿಮ್ಮಡ ಮತ್ತು ಹೊರಾಂಗಣ ವಿಭಾಗದಲ್ಲಿ ಬೆಳಗಾವಿ ಜಿಲ್ಲೆಯವರಾದ ಪರವೀನ್ಬಾನು ಮುನವಳ್ಳಿ, ಅಕ್ಷತಾ ಮಮದಾಪೂರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಲಾವಣ್ಯಾ ನಾಯಕ ಅವರಿಗೆ ಬಹುಮಾನ ವಿತರಿಸಲಾಯಿತು.
ಓದಿ: ಕಲಾಪ ಸಲಹಾ ಸಮಿತಿ ಸಭೆ; ಕಾಂಗ್ರೆಸ್ ನಾಯಕರು ಭಾಗಿ, ಜೆಡಿಎಸ್ ಗೈರು
ಫೈರಿಂಗ್ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಸುಶ್ಮಿತಾ ಕೆ.ಎಸ್, ವಿಜಯಪುರ ಜಿಲ್ಲೆಯ ಭಾಗ್ಯಮ್ಮ ಕೋಟೆಗುಡ್ಡ ಹಾಗೂ ಧಾರವಾಡ ಜಿಲ್ಲೆಯ ಅಶ್ವಿನಿ ಹಿರೇಮಠ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಎಲ್ಲ ಕ್ರೀಡೆಗಳು ಸೇರಿದಂತೆ ಉತ್ತಮ ಪ್ರದರ್ಶನ ನೀಡಿದ ಉತ್ತರ ಕನ್ನಡ ಜಿಲ್ಲೆಯ ಮಹಿಳಾ ಪ್ರಶಿಕ್ಷಣಾರ್ಥಿ ಲಾವಣ್ಯಾ ನಾಯಕ ಅವರಿಗೆ 'ಸರ್ವೋತ್ತಮ ಪ್ರಶಸ್ತಿ' ನೀಡಲಾಯಿತು.