ಧಾರವಾಡ: ಕಾರಾಗೃಹಗಳಿಗೆ ಅಗತ್ಯವಿರುವ ಆಧುನಿಕ ತಾಂತ್ರಿಕ ಉಪಕರಣ ಹಾಗೂ ಸಿಬ್ಬಂದಿ ಸೇರಿದಂತೆ ಎಲ್ಲ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ಕರ್ನಾಟಕ ಕಾರಾಗೃಹಗಳ ಮಹಾ ನಿರೀಕ್ಷಕ ಎನ್ ಎಸ್ ಮೇಘರಿಖ್ ಅವರು ತಿಳಿಸಿದರು.
ಧಾರವಾಡ ಡಿಎಆರ್ ಕವಾಯತ ಮೈದಾನದಲ್ಲಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ಹಾಗೂ ಕರ್ನಾಟಕ ಕಾರಾಗೃಹ ಇಲಾಖೆ ಆಯೋಜಿಸಿದ್ದ 21ನೇ ತಂಡದ ಹಾಗೂ 1ನೇ ಕಾರಾಗೃಹ ಮಹಿಳಾ ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಕಾರಾಗೃಹ ಇಲಾಖೆಯಲ್ಲಿ ನೇಮಕಾತಿ ಹೊಂದುವ ಅಭ್ಯರ್ಥಿಗಳು ಸಂದರ್ಭವನ್ನು ನಿಭಾಯಿಸುವ ಮತ್ತು ಜೈಲು ನಿರ್ವಹಣೆ ಆಡಳಿತ ಕಲೆಯನ್ನು ತಿಳಿದಿರಬೇಕು. ರಾಜ್ಯದಲ್ಲಿರುವ ಜೈಲುಗಳ ಸುಧಾರಣೆಗೆ ಮೊದಲ ಹೆಜ್ಜೆಯಾಗಿ ಅಗತ್ಯ ಸಿಬ್ಬಂದಿ ನೇಮಕಕ್ಕೆ ಕ್ರಮಕೈಗೊಳ್ಳಲಾಗಿದೆ. ಇಲಾಖೆಗೆ ಶಿಸ್ತು ಮುಖ್ಯ ಪ್ರತಿ ಸಿಬ್ಬಂದಿ ಮತ್ತು ಜೈಲು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಮತ್ತು ಬುನಾದಿ ತರಬೇತಿಯಲ್ಲಿ ನೀಡಿದ ವಿವಿಧ ವಿಷಯಗಳ ಜ್ಞಾನವನ್ನು ಅಳವಡಿಸಿಕೊಂಡು ಶಿಸ್ತು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ.ಜಿ ಅವರು ಸ್ವಾಗತಿಸಿ ಶಾಲೆಯ ವರದಿ ವಾಚಿಸಿದರು. ಪರೇಡ್ ಕಮಾಂಡರ್ ಡಿಎಆರ್ನ ಡಿಎಸ್ಪಿ ಹರೀಶಚಂದ್ರ ನಾಯ್ಕ ಹಾಗೂ ಡಿಎಆರ್ನ ಆರ್ಎಸ್ಐ ರಾಜು ಗುಡನಟ್ಟಿ ನೇತೃತ್ವದಲ್ಲಿ ಪ್ರಶಿಕ್ಷಣಾರ್ಥಿಗಳು ಪರೇಡ್ ಮೂಲಕ ಗೌರವ ವಂದನೆ ಸಲ್ಲಿಸಿದರು.
ಧಾರವಾಡ ಹಾಗೂ ಗದಗ ಪೊಲೀಸ್ ವಾದ್ಯ ಮೇಳದ ಕಮಾಂಡರ್ ಐ ಸಿ ಡಿಸೋಜಾ ಹಾಗೂ ಜಿ ಕೆ ಖಾಜಿ ನೇತೃತ್ವದಲ್ಲಿ ಪೊಲೀಸ್ ವಾದ್ಯ ಮೇಳ ತಂಡದ ಸದಸ್ಯರು ಸುಶ್ರಾವ್ಯವಾಗಿ ವಾದ್ಯ ನುಡಿಸಿದರು. ಕಾರಾಗೃಹ ಇಲಾಖೆ ಪೊಲೀಸ್ ಮಹಾ ನಿರೀಕ್ಷಕರ ಎಚ್ ಎಸ್ ರೇವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ತರಬೇತಿ ಅವಧಿಯಲ್ಲಿ ಸಂಘಟಿಸಿದ್ದ ಒಳಾಂಗಣ ಕ್ರೀಡೆಗಳಲ್ಲಿ ಗೀತಾ ದೇವರಮನಿ ಪ್ರಥಮ, ಶಾಂತಾ ಶಿರೂರ ದ್ವೀತಿಯ, ಮಹಾಲಕ್ಷ್ಮಿ ಎ ತೃತೀಯ ಸ್ಥಾನ ಪಡೆದುಕೊಂಡರು. ಹೊರಾಂಗಣ ಕ್ರೀಡೆಗಳಲ್ಲಿ ಶ್ವೇತಾ ಬಾಯಕೆ ಪ್ರಥಮ, ಧನಲಕ್ಷ್ಮಿ ಕೆ ದ್ವಿತೀಯ, ನಿಧಿ ಬಿ ಯು ತೃತೀಯ ಸ್ಥಾನ ಮತ್ತು ಫೈರಿಂಗ್ ವಿಭಾಗದಲ್ಲಿ ಜಿ.ಲಾವಣ್ಯ ಪ್ರಥಮ, ರಂಜಿತಾ ಹಳ್ಳೆರಿ ದ್ವೀತಿಯ, ವಿದ್ಯಾಶ್ರಿ ಮುಂಜೆ ತೃತೀಯ ಸ್ಥಾನದ ಬಹುಮಾನ ಪಡೆದರು. ಓವರ್ ಆಲ್ ಬೆಸ್ಟ್ ಟ್ರೈನಿ ವಿಶೇಷ ಬಹುಮಾನವನ್ನು ಕುಮಾರಿ ಮಹಾಲಕ್ಷ್ಮಿ.ಎ ಅವರಿಗೆ ಎನ್ ಎಸ್ ಮೇಘರಿಖ್ ನೀಡಿದರು. ಈ ವೇಳೆ ಎಲ್ಲ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.