ಹುಬ್ಬಳ್ಳಿ : ಬಡವರ ಹಸಿವು ನೀಗಿಸಲೆಂದೇ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್ ಲಾಕ್ಡೌನ್ ಬಳಿಕ ತೆರೆದುಕೊಂಡರೂ ಮೊದಲಿದ್ದ ಸತ್ವ ಹಾಗೂ ರುಚಿಯನ್ನು ಕಳೆದುಕೊಂಡಿದ್ದಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಅವ್ಯವಸ್ಥೆ ಕಂಡು ರೋಸಿ ಹೋಗಿದ್ದಾರೆ.
ಆರಂಭದಿಂದಲೂ ಒಂದಲ್ಲಾ ಒಂದು ರೀತಿ ಇಲ್ಲಿನ ಇಂದಿರಾ ಕ್ಯಾಂಟೀನ್ಗಳು ಸುದ್ದಿಯಾಗುತ್ತಲೇ ಇವೆ. ಹುಬ್ಬಳ್ಳಿಯಲ್ಲಿ 7, ಧಾರವಾಡದಲ್ಲಿ 2 ಸೇರಿ ಒಟ್ಟು 9 ಇಂದಿರಾ ಕ್ಯಾಂಟೀನ್ಗಳು ಅವಳಿನಗರದಲ್ಲಿವೆ. ಆದರೆ, ಕೋವಿಡ್ ಸಂಕಷ್ಟಕ್ಕಿಂತ ಮೊದಲಿದ್ದ ಊಟದ ಕ್ವಾಲಿಟಿ ಈಗಿಲ್ಲ. ಅಲ್ಲದೇ ಅವ್ಯವಸ್ಥೆ ಕೂಡ ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಇಂದಿರಾ ಕ್ಯಾಂಟೀನ್ ನಂಬಿಕೊಂಡಿರುವ ಬಡ ಕಾರ್ಮಿಕರು, ಕಿಮ್ಸ್ಗೆ ಬರುವ ರೋಗಿಗಳು, ಇತರರಿಗೆ ಇದು ಸಮಸ್ಯೆ ತಂದಿಟ್ಟಿದೆ. ಕೆಲವೆಡೆ ಶುಚಿತ್ವ ನಿರ್ವಹಿಸುತ್ತಿಲ್ಲ ಎಂಬ ದೂರು ಸಹ ಕೇಳಿ ಬಂದಿವೆ.
ಸರಿಯಾದ ನಿರ್ವಹಣೆ ಕೊರತೆಯಿಂದ ಇಂದಿರಾ ಕ್ಯಾಂಟೀನ್ ಗುಣಮಟ್ಟದ ಆಹಾರ ಹಾಗೂ ಉಪಹಾರ ನೀಡುವಲ್ಲಿ ವಿಫಲವಾಗಿವೆ ಎಂಬುವುದು ಸಾರ್ವಜನಿಕ ಆರೋಪವಾಗಿದೆ. ಕೂಡಲೇ ಇದರ ಬಗ್ಗೆ ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ, ಅವ್ಯವಸ್ಥೆ ಸರಿಪಡಿಸಬೇಕಿದೆ. ಬಡವರಿಗೆ ಕಡಿಮೆ ದರದಲ್ಲಿ ಆಹಾರ ಹಾಗೂ ಉಪಹಾರ ನೀಡುವಲ್ಲಿ ನಿಗಾ ವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.