ಹುಬ್ಬಳ್ಳಿ: ನನಗೂ ಕೂಡ ಸಚಿವನಾಗಬೇಕೆಂಬ ಆಸೆ ಇದೆ. ಕೇವಲ ನನಗಷ್ಟೇ ಅಲ್ಲ ಯಾವುದೇ ಒಬ್ಬ ಶಾಸಕನಾದವನಿಗೂ ಸಚಿವನಾಗಬೇಕಂಬ ಆಸೆ ಇರುತ್ತದೆ. ರಾಜಕೀಯ ಅಂದ ಮೇಲೆ ದೆಹಲಿ ಮಟ್ಟದಲ್ಲಿ ಲಾಬಿ ಇದ್ದೇ ಇರುತ್ತದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ನಮ್ಮ ಹೈಕಮಾಂಡ್ ಅವರದ್ದೇ ಲೆಕ್ಕಾಚಾರದ ಮೇಲೆ ಸಚಿವ ಸ್ಥಾನವನ್ನು ನೀಡುತ್ತಾರೆ. ಈಗಾಗಲೇ ಉತ್ತರ ಭಾರತದ ಎಲ್ಲಾ ಚುನಾವಣೆ ಮುಗಿದಿವೆ. ಹೈಕಮಾಂಡ್ ಗಮನ ದಕ್ಷಿಣ ಭಾರತದ ಮೇಲೆ ಇದೆ. ಈಗ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದರು.
ಅನ್ಯ ಕಾರ್ಯದ ನಿಮಿತ್ತ ದೆಹಲಿಗೆ ಭೇಟಿ: ಮೂರು ಜನರನ್ನು ಡಿಸಿಎಂ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಮಾಧ್ಯಮಗಳ ಸೃಷ್ಟಿ. ಹೈಕಮಾಂಡ್ ಏನು ಮಾಡುತ್ತದೆ ಎಂಬುದು ಅವರಿಗೆ ಗೊತ್ತು. ಅವರನ್ನು ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ.
ಸಚಿವ ಸಂಪುಟದಲ್ಲಿ ಹಿರಿಯರು ಇರಬೇಕು, ಯುವಕರು ಇರಬೇಕು. ಯುವಕರಿಗೆ ಮತ್ತು ಹೊಸ ಮುಖಗಳು ಇದ್ದರೇ ಚೆನ್ನಾಗಿರುತ್ತದೆ. ನಾನು ಕೂಡ ಪಾಸಿಟಿವ್ ಫಲಿತಾಂಶದ ನಿರೀಕ್ಷೆಯಲ್ಲಿದ್ದೇನೆ. ಇದು ಎಲ್ಲವೂ ಹೈಕಮಾಂಡ್ಗೆ ಬಿಟ್ಟ ವಿಚಾರ.
ನಾನು ಸಚಿವ ಸ್ಥಾನಕ್ಕಾಗಿ ದೆಹಲಿ ಭೇಟಿ ನೀಡಿಲ್ಲ. ಅನ್ಯ ಕಾರ್ಯದ ನಿಮಿತ್ತವಾಗಿ ದೆಹಲಿಗೆ ಭೇಟಿ ನೀಡಿದ್ದೆ. ಎಲ್ಲರೂ ಸಚಿವ ಸ್ಥಾನಕ್ಕಾಗಿ ಲಾಭಿ ಮಾಡುವುದು ಸಹಜ, ನಾನೂ ಸಹ ಪ್ರಯತ್ನ ನಡೆಸಿದ್ದೇನೆ. ಸಚಿವ ಸಂಪುಟದಲ್ಲಿ ಕೇವಲ ಹಿರಿಯರು ಇದ್ದರೂ ನಡೆಯುವುದಿಲ್ಲ, ಯುವಕರು ಇದ್ದರೂ ನಡೆಯುವುದಿಲ್ಲ. ಇಲ್ಲಿ ಕಾಂಬಿನೇಷನ್ ಅತಿ ಅವಶ್ಯ ಎಂದು ಹೇಳಿದರು.
ಮಸೀದಿಗಳ ಮೈಕ್ ಬಂದ್ ಮಾಡಲು ಸಹಮತ: ಮಸೀದಿಗಳ ಮೈಕ್ಗಳನ್ನ ತೆರವುಗೊಳಿಸಬೇಕು. ಈಗಂತೂ ಮುಂಜಾನೆ 3 ಗಂಟೆಗೆ ಮೈಕ್ ಹಚ್ಚುತ್ತಿದ್ದಾರೆ. ದೇವಸ್ಥಾನಗಳ ಮೇಲಿನ ಮೈಕ್ಗಳನ್ನೂ ತೆಗೆದು ಹಾಕಲಿ. ಇದೇ ವೇಳೆ, ಶಬ್ದ ಮಾಲಿನ್ಯ ಆಗುತ್ತಿರುವುದು ದೇವಸ್ಥಾನಗಳ ಮೈಕ್ನಿಂದ ಅಲ್ಲ, ಮಸೀದಿಗಳ ಮೇಲಿನ ಮೈಕ್ಗಳಿಂದ ಎಂದು ಹೇಳುವ ಮೂಲಕ ಬೆಲ್ಲದ ದ್ವಂದ್ವ ಹೇಳಿಕೆ ನೀಡಿದರು.
ಇದನ್ನೂ ಓದಿ: 2022ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ: ಅಂತಿಮ ವೇಳಾಪಟ್ಟಿ ಪ್ರಕಟ