ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 21 ನೇ ಅವಧಿಯ ಮಹಾಪೌರ ಹಾಗೂ ಉಪಮಹಾಪೌರ ಸ್ಥಾನಗಳಿಗೆ ಮೇ.28 ರಂದು ಚುನಾವಣೆ ನಡೆಯಲಿದ್ದು,ವೇಳಾಪಟ್ಟಿಯ ಸಮಯದಲ್ಲಿ ಪರಿಷ್ಕರಣೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳೂ ಆಗಿರುವ ಬೆಳಗಾವಿ ವಿಭಾಗ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕ ವಿಧಾನಪರಿಷತ್ತಿನ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಮಹಾಪೌರ ಸ್ಥಾನವು ಸಾಮಾನ್ಯ ವರ್ಗ, ಉಪಮಹಾಪೌರ ಸ್ಥಾನವು ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮೇ.28 ರಂದು ಮಧ್ಯಾಹ್ನ 1.30 ಕ್ಕೆ ಚುನಾವಣೆ ನಡೆಯಲಿದೆ. ಅಂದು ಬೆಳಗ್ಗೆ 9.30 ಗಂಟೆಯಿಂದ 11 ಗಂಟೆಯವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಬಳಿಕ ಮಧ್ಯಾಹ್ನ 1 ಗಂಟೆಗೆ ಸಭೆ ಪ್ರಾರಂಭವಾಗುವುದು. ನಾಮಪತ್ರಗಳ ಪರಿಶೀಲನೆ ನಂತರ ಉಮೇದುವಾರರ ಘೋಷಣೆ ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗುವುದು. ಅಗತ್ಯವಿದ್ದರೆ ಕೈ ಎತ್ತುವ ಮೂಲಕ ಮತದಾನ ನಡೆಸಿ, ನಂತರ ಮತಗಳ ಎಣಿಕೆ, ಫಲಿತಾಂಶ ಘೋಷಣೆ ಮಾಡಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ನಗರ ಪಾಲಿಕೆಯ ಚುಕ್ಕಾಣಿ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್ ಕಸರತ್ತು: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ಇದೇ 28 ಕ್ಕೆ ನಿಗದಿಯಾಗಿದ್ದು, ಅತ್ತ ಬಿಜೆಪಿ ಪಾಳಯದಲ್ಲಿ ಮೇಯರ್ ಹಾಗೂ ಉಪಮೇಯರ್ ಚುಕ್ಕಾಣಿಗಾಗಿ ತಿಕ್ಕಾಟ ನಡೆದರೆ, ಇತ್ತ ಕಾಂಗ್ರೆಸ್ ನಲ್ಲೂ ಪಾಲಿಕೆಯ ಗಾದಿಗಾಗಿ ಆಂತರಿಕ ಕಸರತ್ತು ನಡೆದಿದೆ.
ರಾಜ್ಯ ರಾಜಕೀಯದಂತೆ ಪಾಲಿಕೆ ಚುಕ್ಕಾಣಿ ಹಿಡಿಯಲು ಕೈ ಪಡೆ ಆಪರೇಷನ್ ನಡೆಸಿದೆಯಾ ಎಂಬ ಅನುಮಾನ ಶುರುವಾಗಿದೆ. ಇತ್ತ ಪಾಲಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ. ಒಂದೆಡೆ ಬಿಜೆಪಿ ಸದಸ್ಯರಿಗೆ ಕಾಂಗ್ರೆಸ್ ಗಾಳ ಹಾಕಿದೆ ಎಂದು ಹೇಳಲಾಗುತ್ತಿದೆ.
ಪಾಲಿಕೆಯ 82 ಸ್ಥಾನಗಳ ಪೈಕಿ ಬಿಜೆಪಿ 39, ಕಾಂಗ್ರೆಸ್ 33, ಜೆಡಿಎಸ್ 1, ಎಐಎಂಐಎಂ 3 ಹಾಗೂ ಪಕ್ಷೇತರ 6 ಸ್ಥಾನ ಚುನಾಯಿತರಾಗಿರುವ ಸದಸ್ಯರು ಇದ್ದಾರೆ. ಪಾಲಿಕೆ ಗಾದಿಗೇರಲು 42 ಜನ ಸದಸ್ಯರ ಬಹುಮತ ಬೇಕಾಗಿದೆ. ಅದರಂತೆಯೇ ಸ್ಥಳೀಯ ಸಂಸ್ಥೆಯಿಂದ ಚುನಾಯಿತರಾಗಿರುವ 9 ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಬೆಂಬಲದ ಬಲ ಬಿಜೆಪಿಗೆ ಇದೆ.
ಅತ್ತ ಬಿಜೆಪಿಯಿಂದ ಅಸಮಾಧಾನಗೊಂಡವರನ್ನು ಸೆಳೆಯೋ ತಂತ್ರವನ್ನು ಕಾಂಗ್ರೆಸ್ ನಡೆಸಿದ್ದು, ಉಭಯಪಕ್ಷಗಳ ತಿಕ್ಕಾಟದಲ್ಲಿ ಪಾಲಿಕೆಯ ಗಾದಿ ಯಾರಿಗೆ ಒಲಿಯಲಿದೆ ಕಾದುನೋಡಬೇಕಷ್ಟೇ.
ಓದಿ : ಬಹಮನಿ ಕೋಟೆಯಲ್ಲಿ ದೇವಸ್ಥಾನವಿದೆ, ಅಭಿವೃದ್ಧಿ ಪಡಿಸಿ: ಹಿಂದೂ ಮುಖಂಡರ ಆಗ್ರಹ