ಹುಬ್ಬಳ್ಳಿ: ಸಿನಿಮಾಗೆ ಯಾವುದೇ ಭಾಷೆ ಇಲ್ಲ. ಭಾಷೆ ಇಲ್ಲದ ಭಾವನಾತ್ಮಕ ಚಿತ್ರಣವೇ ಈ ಸಿನಿಮಾ. ಇಲ್ಲಿ ಯಾವುದೇ ರೀತಿಯಲ್ಲಿ ವಿವಾದಾತ್ಮಕ ವಿಷಯಗಳನ್ನು ಹುಟ್ಟು ಹಾಕುವುದು ಸರಿಯಲ್ಲ. ಪ್ರತಿಯೊಂದು ಪ್ರಾಂತ್ಯದಲ್ಲಿಯೂ ಭಾಷೆಗಳು ತಮ್ಮದೇ ಆದ ಮಹತ್ವವನ್ನು ಪಡೆದುಕೊಂಡಿವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಜಲಧಾರೆ ಅಭಿಯಾನದ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ ವೇಳೆಯಲ್ಲಿ ಮಾತನಾಡಿದ ಅವರು, ಯಾವುದೇ ಒಂದು ಭಾಷೆಯನ್ನು ಮತ್ತೊಂದು ಬಾಷೆಯ ಮೇಲೆ ಹೇರಿಕೆ ಮಾಡುವುದು ಸರಿಯಲ್ಲ ಎಂದರು. ಸಿನಿಮಾಗಳಿಗೆ ಯಾವುದೇ ಭಾಷೆಗಳಿಲ್ಲ, ನಟರು ಈ ವಿಚಾರಕ್ಕೆ ಹೋಗಬಾರದು. ಸಿನಿಮಾ ಅನ್ನೊದು ಭಾವನಾತ್ಮಕ ಸಂಬಂಧ ಇರುವ ಕ್ಷೇತ್ರ. ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಅದರದೇ ಆದ ಸ್ಥಾನ ಮಾನಗಳು ಇರುತ್ತವೆ. ಹಿಂದಿ ಹೇರಿಕೆ ಒತ್ತಡ ತಂತ್ರ ಸರಿಯಲ್ಲ ಎಂದು ಅಭಿಪ್ರಾಯಿಸಿದರು.
ಚಳ್ಳೆಹಣ್ಣು ತಿನ್ನಿಸಿದ್ದಾರೆ ದಿವ್ಯಾ: ಪಿಎಸ್ಐ ಹಗರಣದ ರೂವಾರಿ ದಿವ್ಯಾ ಹಾಗರಗಿ ಬಂಧಿಸಿದ ವಿಚಾರ, ಇದಕ್ಕೆ ಸರ್ಕಾರವೇ ಉತ್ತರ ನೀಡಬೇಕು. ಅವಳು ರಾಜಕೀಯ ಕೃಪಾ ಕಟಾಕ್ಷದಲ್ಲಿ ಇದ್ದಾಳೋ ಗೊತ್ತಿಲ್ಲ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಯಾರ ಕಣ್ಣಿಗೂ ಸಿಗದೆ ಇರೋದು ಅವರೆಷ್ಟು ಶಕ್ತಿಶಾಲಿ ಅನ್ನೋದು ಗೊತ್ತಾಗುತ್ತದೆ ಎಂದು ಲೇವಡಿ ಮಾಡಿದರು.
ಕಾಣದ ಕೈಗಳು : ಇದಾದ ನಂತರ ಅಂಜುಮನ್ ಇಸ್ಲಾಂ ಸಂಸ್ಥೆಗೆ ಭೇಟಿ ನೀಡಿದ ವೇಳೆಯಲ್ಲಿ ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಮಾತನಾಡಿ, ಹುಬ್ಬಳ್ಳಿಯ ಪೊಲೀಸರನ್ನು ನಾನು ಅಭಿನಂದಿಸುತ್ತೆನೆ. ಸರ್ಕಾರಕ್ಕೆ ಮುಜುಗರ ತರುವಂತಹ ಘಟನೆ ನಡೆಯುತ್ತಿತ್ತು. ಆದರೆ, ಪೊಲೀಸರು ಇದನ್ನೆಲ್ಲಾ ತಪ್ಪಿಸಿದ್ದಾರೆ. ಈ ಘಟನೆ ಹಿಂದೆ ಕಾಣದ ಕೈಗಳು ಯಾರಿದ್ದರೋ ಅಂತವರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದರು.
ನಮ್ಮ ಪಕ್ಷ ಸಮಾಜಘಾತುಕ ಘಟನೆಗಳಿಗೆ ಅವಕಾಶ ಮಾಡಿಕೊಡುವುದಿಲ್ಲ. ಹಿಜಾಬ್, ಹಲಾಲ್ ವಿಚಾರದಲ್ಲಿ ಸರ್ಕಾರ ಪ್ರಾರಂಭದಲ್ಲಿ ಚಿವುಟಿ ಹಾಕಬೇಕಾಗಿತ್ತು. ಹುಬ್ಬಳ್ಳಿಯ ಗಲಭೆ ಪ್ರಕರಣ ಪೂರ್ವ ನಿಯೋಜಿತವಾಗಿದ್ದು, ಡಿ ಜೆ ಹಳ್ಳಿ ,ಕೆ ಜಿ ಹಳ್ಳಿ ಘಟನೆ ನಡೆಯಲು ಕಾರಣಿಭೂತರಾದವರು ಈಗಲೂ ಆರಾಮವಾಗಿ ಓಡಾಡುತ್ತಿದ್ದಾರೆ. ಒಂದು ಪಕ್ಷದ ಮುಖಂಡರ ಜೊತೆಗೆ ಸುತ್ತಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.