ಹುಬ್ಬಳ್ಳಿ- ಸಿ.ಎಸ್. ಶಿವಳ್ಳಿಯವರದ್ದು ಸರಳ, ಸಾಮಾನ್ಯ ಬದುಕು ಸಚಿವರಾದರೂ ಯರಗುಪ್ಪಿಯಲ್ಲಿ ತಾವು ವಾಸವಾಗಿದ್ದ ಹಳೆಯ ಮನೆಯನ್ನು ನವೀಕರಣ ಮಾಡಲೇ ಇಲ್ಲ ಎಂದು ಸಚಿವ ಡಿಕೆ ಶಿವಕುಮಾರ್ ದಿವಂಗತ ಶಿವಳ್ಳಿಯವನ್ನು ಸ್ಮರಿಸಿದ್ದಾರೆ.
ಯರಗುಪ್ಪಿಯಲ್ಲಿ ಮನೆ ಕುಸಿದು ಮೂವರು ಪ್ರಾಣ ಕಳೆದುಕೊಂಡಿದ್ದ ಹಿನ್ನೆಲೆ ಅಲ್ಲಿಗೆ ಭೇಟಿ ನೀಡಿದ ಸಚಿವ ಶಿವಕುಮಾರ್ ಮನೆ ಮಂದಿಗೆ ಸಾಂತ್ವನ ಹೇಳಿದರು. ಈ ವೇಳೆ ಅವರು ಪಾಪ ಶಿವಳ್ಳಿ ಸಹ ಇಂಥದ್ದೇ ಮನೆಯಲ್ಲಿ ವಾಸವಾಗಿದ್ದರು ಎಂದು ತಮ್ಮ ಆಪ್ತರ ಬಳಿ ವಿಚಾರ ವಿನಿಮಯ ಮಾಡಿಕೊಂಡರು. ಆ ಮನೆಯಲ್ಲಿ ಸರಿಯಾಗಿ ಕುಳಿತುಕೊಳ್ಳಲೂ ಜಾಗವಿರಲಿಲ್ಲ. ಕೇವಲ ಒಂದು ಗುಂಟೆ ಜಾಗದಲ್ಲಿ ನಿರ್ಮಾಣದ ಹಂತದಲ್ಲಿದ್ದ ಮನೆಯನ್ನು ಕಂಡು ಸಚಿವ ಶಿವಕುಮಾರ್ ಪಾಪ ಶಿವಳ್ಳಿ ಜೀವನದಲ್ಲಿ ಒಂದು ಮನೆಯನ್ನೂ ಕಟ್ಟಿಸಿಕೊಳ್ಳಲಾಗದೇ ನಮ್ಮನ್ನು ಬಿಟ್ಟು ಅಗಲಿದರು. ಶಿವಳ್ಳಿ ಸಚಿವನಾದರೂ ಒಂದು ಮನೆ ಕಟ್ಟಿಸಿಕೊಳ್ಳಲಾಗಲಿಲ್ಲ. ರಾಜಕಾರಣಿಯಾದವರು ಹೇಗಿರಬೇಕು ಎಂದು ಶಿವಳ್ಳಿ ಪಾಠ ಕಲಿಸಿದ್ದಾರೆ ಎಂದು ನೊಂದು ನುಡಿದರು.
ಶಿವಳ್ಳಿಯವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಅವರ ಸೇವೆಯನ್ನು ಕಂಡು ನಾನೇ ಅವರನ್ನು ಸಚಿವರನ್ನಾಗಿ ಮಾಡುವಂತೆ ಹೈಕಮಾಂಡ್ ಮಟ್ಟದಲ್ಲಿ ಒತ್ತಡ ತಂದಿದ್ದೆ. ಇಂಥ ವ್ಯಕ್ತಿ ಇದ್ದಿದ್ದರೆ ನಿಜವಾಗಿಯೂ ಈ ಕ್ಷೇತ್ರ ಇನ್ನೊಂದಿಷ್ಟು ಅಭಿವೃದ್ಧಿ ಕಾಣುತ್ತಿತ್ತು. ಹಣ, ಆಸ್ತಿ ಪಾಸ್ತಿ ಮಾಡಲು ಬಡಿದಾಡುವ ರಾಜಕಾರಣಿಗಳ ಮಧ್ಯೆ ಶಿವಳ್ಳಿ ಮಾದರಿಯಾಗಿದ್ದರು ಎನ್ನುವಾಗ ಸಚಿವ ಡಿಕೆಶಿ ಭಾವುಕರಾದರು.