ಹುಬ್ಬಳ್ಳಿ : ನಗರದ ಶಿರಡಿ ಸಾಯಿ ಸದ್ಭಕ್ತ ಮಂಡಳಿ ಹಲವು ವರ್ಷಗಳಿಂದ ಅವ್ಯವಹಾರದಲ್ಲಿ ತೊಡಗಿದೆ. ಈ ಬಗ್ಗೆ ಅಧಿಕೃತ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಮಂಡಳಿಗೆ ನೈತಿಕತೆ ಇದ್ರೆ ಕೂಡಲೇ ಬಹಿರಂಗ ಸಭೆಗೆ ಬರಲಿ ಎಂದು ಕರ್ನಾಟಕ ಸಂಗ್ರಾಮ ಸೇನೆಯ ರಾಜ್ಯಾಧ್ಯಕ್ಷ ಸಂಜೀವ ದುಮಕನಾಳ ಸವಾಲು ಹಾಕಿದರು.
ನಗರದಲ್ಲಿ ಮಾತನಾಡಿದ ಅವರು, ಈ ಹಿಂದೆ ಸುದ್ದಿಗೋಷ್ಠಿ ನಡೆಸಿದ ಶಿರಡಿ ಸಾಯಿ ಮಂದಿರದ ಮಂಡಳಿಯ ಕಾರ್ಯದರ್ಶಿ ವೆಂಕಟರಾವ್ ಕುಲಕರ್ಣಿ ಸಾಯಿ ಮಂದಿರದ ಅಧಿಕಾರ ವಹಿಸಿಕೊಂಡು ನಾಲ್ಕು ವರ್ಷಗಳಾಗಿದೆ. ಇದುವರೆಗೆ ಯಾವುದೇ ತಪ್ಪು ಮಾಡಿಲ್ಲ. ಅಲ್ಲದೇ ಯಾವುದೇ ಸಹಕಾರಿ ಇಲಾಖೆಯಿಂದ ತನಿಖೆ ನಡೆದಿಲ್ಲ. ಹಾಗೇನಾದರೂ ತಪ್ಪು ಕಂಡು ಬಂದಲ್ಲಿ ಅಂದೇ ಆಡಳಿತ ಮಂಡಳಿಯಿಂದ ಹೊರ ಬರುತ್ತೇವೆ ಎಂದು ಹೇಳಿದ್ದರು. ಆದರೆ, ಅವರು ಭಕ್ತರಿಗೆ ಮೋಸ ಮಾಡುತ್ತಿದ್ದಾರೆ. ಮಂದಿರದ ಅಭಿವೃದ್ಧಿ ಹೆಸರಿನಲ್ಲಿ ಪರವಾನಿಗೆ ಇಲ್ಲದೆ ಕಟ್ಟಡ ಕಟ್ಟಿಸಿರುವುದು, ಮರ ಕಡಿದಿರುವುದು, ಫುಟ್ಪಾತ್ ಅಗೆದಿದ್ದು ಮಾಡಿದ್ದಾರೆ ಎಂದು ಆರೋಪಿಸಿದರು.
ಕಾನೂನು ಉಲ್ಲಂಘನೆ ಮಾಡಿ ಮಂದಿರದಲ್ಲಿ ವ್ಯಾಪಾರ ಮಾಡಲು ಅನುಮತಿ ನೀಡಿದ್ದಾರೆ. ಜೊತೆಗೆ ಅರ್ಚಕರನ್ನು ಅಮಾನತು ಮಾಡಿದ್ದಾರೆ. ಹೀಗೆ ಹಲವಾರು ಅವ್ಯವಹಾರ ಮಾಡಿರುವ ಶಿರಡಿ ಸಾಯಿ ಮಂದಿರದ ಆಡಳಿತ ಮಂಡಳಿ ಕೂಡಲೇ ನೈತಿಕ ಜವಾಬ್ದಾರಿ ಹೊತ್ತು ಹೊರ ಬರಬೇಕು. ಇಲ್ಲವಾದ್ರೆ ದಾಖಲೆಗಳ ಜೊತೆಗೆ ಮಂದಿರದ ಆವರಣದಲ್ಲಿ ಸತ್ಯ ದರ್ಶನಕ್ಕೆ ಬರಲಿ ಎಂದರು.