ಹುಬ್ಬಳ್ಳಿ: ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮೊದಲ ಬಾರಿಗೆ ಸಚಿವರಾಗಿ ನಗರಕ್ಕೆ ಆಗಮಿಸಿದ್ದ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿ ಅದ್ಧೂರಿಯಾಗಿ ಸ್ವಾಗತಿಸಿದ ಆರೋಪದಡಿ 200 ಬಿಜೆಪಿ ಕಾರ್ಯಕರ್ತರ ವಿರುದ್ಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಪಿಎಂಸಿ ಈಶ್ವರ ನಗರದ ಸಂತೋಷ ಹಿರೇಮಠ, ಮಂಜುನಾಥ ಹೆಬಸೂರ, ಕರಣ ದುಂಡಿ, ಆನಂದ ಹಡಪದ, ಮಲ್ಲಿಕಾರ್ಜುನ ಹಿರೇಮಠ, ಹರೀಶ ಹಳ್ಳಿಕೇರಿ, ಶಿವರಾಜ ದೊಡ್ಡಮನಿ, ಕಾರ್ತಿಕ ನಾಯ್ಡು, ನಾಗೇಶ ಕಲ್ಲಪ್ಪ, ಚನ್ನಬಸು ಪಾಟೀಲ, ಶರತ ಅಂಗಡಿ ಸೇರಿದಂತೆ 150 ರಿಂದ 200 ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ.
ಕೆಲ ದಿನಗಳ ಹಿಂದೆ ಸಚಿವರಾದ ಬಳಿಕ ಶಂಕರ ಪಾಟೀಲ ಮುನೇನಕೊಪ್ಪನವರು ನಗರಕ್ಕೆ ಆಮಿಸಿದ್ದರು. ಈ ವೇಳೆ, ವಿಮಾನ ನಿಲ್ದಾಣದ ಬಳಿ ನೂರಾರು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಗುಂಪು ಸೇರಿದ್ದರು. ಮಾಸ್ಕ್ ಧರಿಸದೇ ಪರಸ್ಪರ ಅಂತರ ಕಾಯ್ದುಕೊಳ್ಳದೆ ಕೊರೊನಾ ನಿಯಮ ಉಲ್ಲಂಘಿಸಿದ್ದರು. ಈ ಕುರಿತು ಗೋಕುಲ ರೋಡ್ ಪೊಲೀಸರು 200 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಓದಿ: ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಬರೆ: ಅಡುಗೆ ಸಿಲಿಂಡರ್ ಬೆಲೆಯಲ್ಲಿ 25 ರೂ.ಏರಿಕೆ