ಹುಬ್ಬಳ್ಳಿ: ಬಡ್ತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದ್ದು, ತೀರ್ಪಿನ ವಿರುದ್ಧ ಫೆ.23 ರಂದು ಭಾರತ ಬಂದ್ಗೆ ಕರೆ ಕೊಡಲಾಗಿದೆ.
ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ದಲಿತ ಮುಖಂಡ ಪಿತಾಂಬ್ರಪ್ಪ ಬಿಳಾರ ಹೇಳಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ನೌಕಕರಿಗೆ, ಸರ್ಕಾರಿ ನೌಕರಿಯ ಬಡ್ತಿ ಮೀಸಲಾತಿಯು ಮೂಲಭೂತವಾದ ಹಕ್ಕಲ್ಲ ಎಂದು ತೀರ್ಪು ನೀಡಿ ಮೀಸಲಾತಿ ಕಲ್ಪಿಸುವುದು ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟಿರುವ ವಿಷಯ ಎಂಬುದಾಗಿ ತಿಳಿಸುವ ಮೂಲಕ ಶೋಷಿತ ಸಮುದಾಯದವರು ಉನ್ನತ ಹುದ್ದೆಗೆ ತಲುಪುವ ವಿಷಯಕ್ಕೆ ತೀವ್ರವಾದ ಕೊಡಲಿ ಏಟು ಕೊಟ್ಟಿದೆ ಎಂದು ಆರೋಪಿಸಿದರು.
ಈ ತೀರ್ಪನ್ನು ವಿರೋಧಿಸಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಭಾರತ ಬಂದ್ಗೆ ಕರೆ ನೀಡಿದ್ದು, ಇದಕ್ಕೆ ಹುಬ್ಬಳ್ಳಿಯಲ್ಲಿಯೂ ಬೆಂಬಲ ಸೂಚಿಸಲಾಗುತ್ತಿದೆ ಎಂದರು.
ಫೆ.23 ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಶಾಂತಿಯುತ ಬಂದ್ ಆಚರಣೆ ಮಾಡಲಾಗುತ್ತಿದ್ದು, ಮಹಾಮಂಡಳ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸುತ್ತವೆ ಎಂದು ಮಾಹಿತಿ ನೀಡಿದರು.