ದಾವಣಗೆರೆ: ರಾಜ್ಯದಲ್ಲಿ ಒಟ್ಟು ಇನ್ನೂರು ಶಿಲಾಶಾಸನಗಳಿದ್ದವು. ನಾಗರಿಕರಣದಿಂದ ಅದರ ಸಂಖ್ಯೆ ಕೇವಲ ಮೂವತ್ತಕ್ಕೆ ಬಂದು ನಿಂತಿದೆ. ಶಿಲಾಶಾಸನಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದು ಮೈಸೂರು ಸಂಸ್ಥಾನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಜನರಿಗೆ ಕರೆ ನೀಡಿದರು.
ದಾವಣಗೆರೆ ತಾಲೂಕಿನ ಕೋಲ್ಕುಂಟೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಳೇ ಶಿಲಾಶಾಸನ ಮರು ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೋಲ್ಕುಂಟೆ ಗ್ರಾಮದಲ್ಲಿ ದೊರೆತಿದ್ದ ಶಿಲಾಶಾಸನವನ್ನು ಇಲ್ಲಿನ ಗ್ರಾಮಸ್ಥರು ಉಳಿಸುವ ಕೆಲಸ ಮಾಡಿ ಅದನ್ನು ಮರು ಅನಾವರಣ ಮಾಡಿರುವುದು ಶ್ಲಾಘನೀಯ ಕೆಲಸ ಎಂದರು.
ಪ್ರಕೃತಿ ಸಂರಕ್ಷಣೆ ಮಾಡುವ ಮಾತುಗಳನ್ನಾಡಿದ ಅವರು, ಮುಂದಿನ ಪೀಳಿಗೆಗೆ ನಾವು ಸಂಸ್ಕೃತಿ ಪರಂಪರೆಯನ್ನು ಬೆಳೆಸಬೇಕಾಗಿದೆ. ದೇವಾಲಯಗಳು ಮುಂದಿನ ಪೀಳಿಗೆಗೆ ಮಾದರಿಯಾಗಬೇಕಾಗಿದೆ. ಮೊದಲು ಬುಟ್ಟಿಯಲ್ಲಿ ಕಾಯಿ ಹಣ್ಣು ತೆಗೆದುಕೊಂಡು ಹೋಗುತ್ತಿದ್ದೆವು. ಆದರೆ, ಇದೀಗ ಪ್ಲಾಸ್ಟಿಕ್ ಬಳಕೆ ಮಾಡಿ ಅಲ್ಲೇ ಬಿಸಾಕಿ ಹೋಗುತ್ತಿದ್ದಾರೆ ಎಂದು ಹೇಳಿದರು.
ಪ್ಲಾಸ್ಟಿಕ್ ಪರಿಸರವನ್ನು ಹಾಳು ಮಾಡುತ್ತಿದೆ. ನಾವು ಸೇವಿಸುವ ಆಹಾರದಲ್ಲೂ ಹಾಗೂ ನಮ್ಮ ದೇಹದಲ್ಲಿಯೂ ಕೂಡ ಪ್ಲಾಸ್ಟಿಕ್ ಬಂದಿದೆ. ಈಗಿನಿಂದಲೇ ಪ್ಲಾಸ್ಟಿಕ್ ನಿಷೇಧ ಮಾಡೋಣ ಎಂದು ಜನರಲ್ಲಿ ಕರೆ ನೀಡಿದರು. ಈ ಶಿಲಾಶಾಸನಗಳಿಂದ ಅವರ ಬಗ್ಗೆ ಇತಿಹಾಸ ಪರಂಪರೆಯ ಬಗ್ಗೆ ತಿಳಿಸುತ್ತಿದ್ದಾರೆ. ಅದನ್ನು ಸಂರಕ್ಷಣೆ ಮಾಡುವ ಕೆಲಸವನ್ನು ನಾವು ಮಾಡಬೇಕು. ಈ ಗ್ರಾಮದವರು ಆ ಕೆಲಸವನ್ನು ಮಾಡಿದ್ದೀರಿ. ನಾನು ಧನ್ಯವಾದ ಅರ್ಪಿಸುತ್ತೇವೆ ಎಂದರು.
ಕರುನಾಡಿನಲ್ಲಿ ಕನ್ನಡವೇ ಮೊದಲು: ಕರುನಾಡಿನಲ್ಲಿ ಕನ್ನಡವೇ ಮೊದಲು. ಕನ್ನಡವನ್ನೇ ರಾಜ್ಯದಲ್ಲಿ ಪ್ರಥಮವಾಗಿರುವಂತೆ ನೋಡಿಕೊಳ್ಳಬೇಕು. ಭಾರತದಲ್ಲಿ ಹಿಂದಿ ಕೂಡ ಒಂದು ಭಾಷೆ. ಕನ್ನಡ ಕೂಡ ಒಂದು ಭಾಷೆ. ಎಲ್ಲ ಭಾಷೆಗಳಿಗೂ ಕೂಡ ಸಮಾನತೆ ನೀಡಬೇಕು ಎಂದ ಯದುವೀರ್ ಅವರು ತಿಳಿಸಿದರು.
ಓದಿ: ಕೋವಿಡ್ 4ನೇ ಅಲೆ: ಇಂದಿನಿಂದ ಕಟ್ಟುನಿಟ್ಟಿನ ನಿಯಮ ಜಾರಿಗೆ ಮುಂದಾದ ಬಿಬಿಎಂಪಿ