ದಾವಣಗೆರೆ: ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದ ಪತಿಯನ್ನು ಪತ್ನಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಬಾತಿ ಗ್ರಾಮದಲ್ಲಿ ನಡೆದಿದೆ.
ಶ್ರೀನಿವಾಸ್ (35) ಕೊಲೆಯಾದ ವ್ಯಕ್ತಿ. ಜಹೀದಾ ಬಾನು ಹತ್ಯೆ ಮಾಡಿದ ಹೆಂಡತಿ. ಈತ ಬಾತಿ ಗ್ರಾಮದ ಎಂದು ಗುರುತಿಸಲಾಗಿದೆ.
![Davanagere](https://etvbharatimages.akamaized.net/etvbharat/images/3040819_tdfdfjpg.jpg)
ಕೊಲೆಗೆ ಕಾರಣವೇನು...?
ಕಳೆದ 20 ವರ್ಷಗಳ ಹಿಂದೆ ಜಹೀದಾ ಬಾನು ವಿವಾಹವಾಗಿತ್ತು. 3 ವರ್ಷಗಳ ಬಳಿಕ ತನ್ನ ಗಂಡನಿಂದ ವಿಚ್ಚೇದನ ಪಡೆದಿದ್ದರು. ಜಹೀದಾ ಬಾನುಗೆ ಒಬ್ಬಳು ಮಗಳು ಇದ್ದಾಳೆ. ಈ ವೇಳೆ ಶ್ರೀನಿವಾಸನಿಗೆ ಜಹೀದಾಳ ಪರಿಚಯವಾಗಿತ್ತು. ಈ ಪರಿಚಯ ಪ್ರೇಮಕ್ಕೆ ತಿರುಗಿ ಬಳಿಕ ಇಬ್ಬರು ಮದುವೆ ಆಗಿದ್ದರು. ಇಬ್ಬರು ಬಾತಿ ಗ್ರಾಮದಲ್ಲಿ ವಾಸವಿದ್ದರು.
ಆದರೆ ಕಳೆದ 6 ವರ್ಷಗಳ ಹಿಂದೆ ಬೆಂಗಳೂರಿಗೆ ಹೋಗಿದ್ದ ಈತ ಅಲ್ಲಿ ಬೇರೊಬ್ಬಳ ಜೊತೆ ವಿವಾಹವಾಗಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ್ ಮತ್ತು ಜಹೀದಾಳ ಮಧ್ಯೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಬೆಂಗಳೂರಿನಿಂದ ಬಾತಿ ಗ್ರಾಮಕ್ಕೆ ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಿದ್ದನು ಎಂದು ಹೇಳಲಾಗುತ್ತಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಾತಿ ಗ್ರಾಮಕ್ಕೆ ಶ್ರೀನಿವಾಸ್ ಬಂದಿದ್ದನು. ಈತನ ಜೊತೆ ಜಹೀದಾ ತಗಾದೆ ತೆಗೆದಿದ್ದಾಳೆ. ಇನ್ನೊಬ್ಬಳನ್ನು ಮದುವೆಯಾಗಿ ನನಗೆ ಯಾಕೆ ಮೋಸ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾಳೆ. ಈ ವಿಷಯಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿದೆ. ಆಗ ಸಿಟ್ಟಿಗೆದ್ದ ಜಹೀದಾ ಕಟ್ಟಿಗೆಯಿಂದ ಹೊಡೆದು ಶ್ರೀನಿವಾಸ್ನನ್ನು ಕೊಂದು ಹಾಕಿದ್ದಾಳೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ದಾವಣಗೆರೆ ಗ್ರಾಮಾಂತರ ಪೊಲೀಸರು ಆರೋಪಿ ಜಹೀದಾಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.