ಹರಿಹರ (ದಾವಣಗೆರೆ): ಕೆರೆಗಳಿಗೆ ನೀರು ಸರಬರಾಜು ಮಾಡುವ ಪೈಪ್ಲೈನ್ ನೀರಿನ ರಭಸಕ್ಕೆ ಒಡೆದು, ಕಾರಂಜಿಯ ರೀತಿಯಲ್ಲಿ ಆಕಾಶದೆತ್ತರಕ್ಕೆ ಚಿಮ್ಮುತ್ತಿದೆ. ತಾಲೂಕಿನ ಹರಗನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪೈಪ್ಲೈನ್ ಒಡೆದಿದ್ದು, ವಾಹನ ಸವಾರರು ನೀರಿನ ಕಾರಂಜಿಯ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯ ಕಂಡು ಬಂತು.
ಈ ವರ್ಷದ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದ ತಿಂಗಳೊಳಗೆ ಎರಡು ಬಾರಿ ಪೈಪ್ಲೈನ್ ಒಡೆದಿದೆ. ಈ ಹಿಂದೆ ಬಾತಿ ಸಮೀಪ ಸೋರಿಕೆ ಕಂಡು ಬಂದರೆ, ಈ ಬಾರಿ ಹರಗನಹಳ್ಳಿ ಬಳಿ ಪೈಪ್ ಒಡೆದ ಕಾರಣ ಒಂದೇ ತಿಂಗಳಲ್ಲಿ ಒಂದು ವಾರ ನೀರು ಸರಬರಾಜಾಗಿಲ್ಲ. ಇದೇ ರೀತಿ ಹದಿನೈದು ದಿನಕ್ಕೊಮ್ಮೆ ಪೈಪ್ ಒಡೆದರೆ ಸಂಸದರು ಹೇಳಿದ 180 ದಿನ ನೀರು ಸರಬರಾಜು ಮಾಡುವ ಮಾತು ಸುಳ್ಳಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಈ ಯೋಜನೆ ಪ್ರಾರಂಭವಾದಾಗಿನಿಂದಲೂ ಇದೇ ರೀತಿಯ ಸಮಸ್ಯೆ ಕಾಡುತ್ತಿದ್ದು, ಸ್ಥಳೀಯ ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗುತ್ತಿದೆ. ಎಷ್ಟು ಬಾರಿ ಪೈಪ್ಗಳಿಗೆ ತ್ಯಾಪೆ ಹಾಕಿದರೂ ಮತ್ತೆ ಮತ್ತೆ ಬೇರೆ ಸ್ಥಳಗಳಲ್ಲಿ ನೀರಿನ ರಭಸಕ್ಕೆ ಪೈಪು ಒಡೆದು ಸರಬರಾಜು ನಿಲ್ಲುತ್ತಿದೆ. ತಿಂಗಳಲ್ಲಿ ಎರಡರಿಂದ ಮೂರು ಬಾರಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂಬುದು ಸ್ಥಳೀಯರ ಆರೋಪವಾಗಿದೆ.