ದಾವಣಗೆರೆ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೊಗಳಿರುವ ಬಗ್ಗೆ ನನಗೇನೂ ಗೊತ್ತಿಲ್ಲ. 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದರೆ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚನೆ ಸಂಬಂಧ ಆಲೋಚನೆ ಮಾಡಿಲ್ಲ. ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯುತ್ತಾರೆ ಅಷ್ಟೇ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಹೆಲಿಪ್ಯಾಡ್ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ದೇವೇಗೌಡರ ಹೇಳಿಕೆಯ ಮರ್ಮವೇನೋ ಗೊತ್ತಿಲ್ಲ. ನೀವೇ ಹೇಳಬೇಕು. ಪಕ್ಷಕ್ಕಾಗಿ ತ್ಯಾಗ ಮಾಡಿರುವ ಸೋನಿಯಾ ಗಾಂಧಿ ಪವರ್ಫುಲ್ ನಾಯಕಿ. ದೇವೇಗೌಡರು ಹೊಗಳಿದ್ದರಲ್ಲಿ ಅಚ್ಚರಿ ಏನಿಲ್ಲ ಎಂದ ಅವರು, ಫಲಿತಾಂಶದ ಬಳಿಕ ಮತ್ತೆ ಜೆಡಿಎಸ್ ಜೊತೆ ಮೈತ್ರಿ ಕುರಿತು ಏನೂ ಪ್ರತಿಕ್ರಿಯೆ ನೀಡಲಿಲ್ಲ.
ಉಪ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಯಾಕೆ ಬಂದಿಲ್ಲ. ನೆರೆ ಬಂದಾಗ ನಿರ್ಲಕ್ಷಿಸಿದ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಉಪಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳು ಸೋಲಲಿದ್ದಾರೆ. ನೆರೆ ಬಂದಾಗ ಬಾರದೇ ಇರುವವರು ಈಗ ಬರುತ್ತಾರಾ, ಜನರು ಅವರನ್ನು ಬೆಂಬಲಿಸುತ್ತಾರಾ ಎಂದು ಪ್ರಶ್ನಿಸಿದರು.
ಚುನಾವಣೆಯಲ್ಲಿ ಬಿಜೆಪಿ ಯಥೇಚ್ಛವಾಗಿ ಹಣ ಖರ್ಚು ಮಾಡುತ್ತಿದೆ. ಈ ಒಪ್ಪಂದ ಮಾಡಿಕೊಂಡೇ 17 ಶಾಸಕರನ್ನು ಸೆಳೆದದ್ದು. ಸಿಎಂ ಯಡಿಯೂರಪ್ಪ ಒಬ್ಬರೆ ಪ್ರಚಾರಕ್ಕೆ ಹೋಗ್ತಾರೆ. ಈ ಬಗ್ಗೆ ಯಾರೂ ಮಾತನಾಡಲ್ಲ. ಎಲ್ಲರೂ ಬಿಎಸ್ವೈ ಜೊತೆಗೆ ಹೋಗ್ತಿದ್ದಾರಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನಲ್ಲಿ ಎಲ್ಲಾ ಹಿರಿಯ ಮುಖಂಡರು ಪ್ರಚಾರ ಮಾಡ್ತಿದ್ದಾರೆ. ಅಸಮಾಧಾನದ ಪ್ರಶ್ನೆಯೇ ನಮ್ಮಲ್ಲಿ ಇಲ್ಲ. ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಹಿರಿಯ ಮುಖಂಡರು ಒಂದೊಂದು ಕಡೆ ಪ್ರಚಾರ ಮಾಡ್ತಿದ್ದಾರೆ. ಒಂದಿಬ್ಬರು ಪ್ರಚಾರಕ್ಕೆ ಬಂದಿಲ್ಲ ಎಂದರೆ ಅಸಮಾಧಾನ ಹೇಗಾಗುತ್ತೆ. ವಿ. ಎಸ್. ಉಗ್ರಪ್ಪ ಹಿರಿಯ ಮುಖಂಡರಲ್ಲವೇ. ಎಲ್ಲರೂ ಆಯಾ ಸ್ಥಳಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದರು.
ಹಿರೇಕೆರೂರಿನಲ್ಲಿ ಬಿ. ಸಿ. ಪಾಟೀಲ್ ಸೋಲು ಖಚಿತ. ಕಾಂಗ್ರೆಸ್ ಅಭ್ಯರ್ಥಿ ಬನ್ನಿಕೋಡ್ ಪ್ರಾಮಾಣಿಕ ವ್ಯಕ್ತಿ. ಈ ಬಾರಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.