ಹರಿಹರ : ಸೈನ್ಯದಲ್ಲಿ ಸಲ್ಲಿಸಿದ ಸೇವೆ ಆತ್ಮತೃಪ್ತಿ ನೀಡಿದೆ ಎಂದು ನಗರದ ವಿಜಯನಗರ ಬಡಾವಣೆ ವಾಸಿ ಭಾರತೀಯ ಸೇನೆಯಲ್ಲಿ ಸೇವಾ ನಿವೃತ್ತಿ ಹೊಂದಿದ ಕೊಟ್ರೇಶ್ ಜಿ.ಎನ್. ಹೇಳಿದರು.
ನಗರದ ಗಾಂಧಿ ಮೈದಾನದಲ್ಲಿ ಸಾಯಿ ತಂಡದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 2004 ರಿಂದ ಇಲ್ಲಿವರೆಗೆ 17 ವರ್ಷಗಳ ಕಾಲ ಸೈನ್ಯದಲ್ಲಿದ್ದೆ. ಲಾನ್ಸ್ ನಾಯಕ್ ಸ್ಥಾನ ಪಡೆದು ನಿವೃತ್ತಿ ಹೊಂದಿದ್ದೇನೆ. ಬಾಲ್ಯದಿಂದಲೂ ದೇಶ ಸೇವೆ ಮಾಡುವ ಅಭಿಲಾಷೆ ಇತ್ತು. ತಂದೆ, ತಾಯಿ ಪ್ರೋತ್ಸಾಹದಿಂದ ಸೈನ್ಯ ಸೇರಿದೆ. 17 ವರ್ಷಗಳ ಸೇವೆ ಅದ್ಭುತ ಅನುಭವ ನೀಡಿದೆ. ಈವರೆಗೆ ಪಾಕ್ಗಡಿಯ ಜಮ್ಮುು- ಕಾಶ್ಮೀರ, ಚೀನಾಗಡಿ, ಭೂತಾನ್, ಪಂಜಾಬ್, ರಾಜಸ್ಥಾನ ಸೇರಿದಂತೆ ನಾನಾ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದೇನೆ.
ಅತಿಯಾದ ಚಳಿ, ಬಿಸಿಲು, ಗಾಳಿಯಲ್ಲಿ ಹಗಲು-ರಾತ್ರಿ ಎನ್ನದೆ ಕರ್ತವ್ಯ ನಿರ್ವಹಣೆ ಸೈನಿಕರಲ್ಲಿ ದೈಹಿಕ, ಮಾನಸಿಕ ಸದೃಢತೆ ಬೆಳೆಸುತ್ತದೆ. ಯುವ ಜನಾಂಗ ಸೇನೆಯಲ್ಲಿ ಸೇವೆ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಋಣಗಳ ಪೈಕಿ ತಾಯಿನಾಡ ಋಣವೂ ಪ್ರಮುಖವಾದದ್ದು ಎಂದರು.
ಬಳಿಕ ಕೊಟ್ರೇಶ್ರ ಪತ್ನಿ ಮಾನಸಿ ಮಾತನಾಡಿ, ಮನೆ ಯಜಮಾನರು ಮನೆಯಲ್ಲಿ ಇರಲಿಲ್ಲ. ಆದರೂ ಕೂಡ ದೇಶ ಮಾಡುತ್ತಿದ್ದಾರೆಂಬ ಹೆಮ್ಮೆಯಿಂದ ಕುಟುಂಬದವರೆಲ್ಲಾ ಅವರಿಗೆ ಬೆಂಬಲವಾಗಿದ್ದೆವು. ದೇಶದ್ರೋಹಿ, ಉಗ್ರಗಾಮಿಗಳ ವಿರುದ್ಧದ ಹಲವು ಕಾರ್ಯಾಚರಣೆಗಳಲ್ಲಿ ಭಾಗವಹಿಸಿ ಯಶಸ್ವಿಯಾಗಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆಎಂದರು.
ಈ ವೇಳೆ ನಿಂಗರಾಜ್ ದಾವಣಗೆರೆ, ಮಧುಸೂಧನ್, ಮಲ್ಲೇಶ್, ಶ್ರೀರಾಮ್, ನಿಶಾಂತ್, ಮಾರುತಿ, ಸೃಷ್ಟಿ ಕೆ., ಪರಶುರಾಮ, ಬಸವರಾಜ್, ಭರತ್, ಲಕ್ಷ್ಮಣ್ ಇತರರಿದ್ದರು.