ದಾವಣಗೆರೆ: ಕತ್ತೆ ಮದುವೆ, ಕೋತಿ ಮದುವೆ ಹಾಗೂ ಕತ್ತೆ ಮೆರವಣಿಗೆ ಮಾಡಿದರೆ ಮಳೆ ಬರುತ್ತೆ, ಕೆರೆ ಕಟ್ಟೆಗಳು ತುಂಬುತ್ತವೆ ಎಂಬ ನಂಬಿಕೆ ಹಿರಿಯರದ್ದು. ಇಂಥ ಆಚರಣೆಗಳ ತರುವಾಯ ಮಳೆ ಸುರಿದಿರುವ ಉದಾಹರಣೆಗಳೂ ಇವೆ.
ಕತ್ತೆ ಮೆರವಣಿಗೆ: ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಚನ್ನಗಿರಿಯ ದಾಗೀನಕಟ್ಟೆ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಒಣಗಲಾರಂಭಿಸಿವೆ. ಗ್ರಾಮದಲ್ಲಿ ಮಳೆರಾಯನ ಕೃಪೆಗಾಗಿ ಗ್ರಾಮಸ್ಥರು ಇಡೀ ಗ್ರಾಮದಲ್ಲಿ ಕತ್ತೆ ಮೆರವಣಿಗೆ ಮಾಡಿದ್ದಾರೆ. ಮೊದಲಿಗೆ ಕತ್ತೆಗೆ ಪೂಜೆ ಸಲ್ಲಿಸಿದ ಗ್ರಾಮಸ್ಥರು, ಗ್ರಾಮದ ಬೀದಿಗಳಲ್ಲಿ ತಮಟೆ ಬಾರಿಸುತ್ತಾ ಮೆರವಣಿಗೆ ಮಾಡಿದರು. ಈ ಮೂಲಕ ಮಳೆರಾಯನನ್ನು ಆಹ್ವಾನಿಸಿದರು.
ಮೆಕ್ಕೆಜೋಳ ಒಣಗಲು ಆರಂಭವಾಗಿದೆ. ಮಳೆ ಕೈಕೊಟ್ಟಿದ್ದು ಫಸಲು ಕೈತಪ್ಪುವ ಆತಂಕ ರೈತರದ್ದು. ಅಡಿಕೆ, ಬಾಳೆ, ತೆಂಗಿನ ತೋಟಗಳೂ ನೀರಿಲ್ಲದ ಕಾರಣಕ್ಕೆ ಸೊರಗುವ ಹಂತ ತಲುಪಿವೆ. ಇದರಿಂದಾಗಿ ರೈತರು ತಲೆಮೇಲೆ ಕೈಯಿಟ್ಟು ಕೂರುವ ಪರಿಸ್ಥಿತಿ ತಲೆದೋರಿದೆ.
ದಾಗೀನಕಟ್ಟೆ ಗ್ರಾಮದ ನಿವಾಸಿ, ರೈತ ಸಂಘದ ಕಾರ್ಯಾಧ್ಯಕ್ಷ ಸಂತೋಷ್ ಮಾತನಾಡಿ, "ಗ್ರಾಮದಲ್ಲಿ ಮೆಕ್ಕೆಜೋಳ, ತೆಂಗು, ಅಡಿಕೆ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. 15 ದಿನಗಳಿಂದ ಮಳೆಯಾಗದೇ ಇರುವುದರಿಂದ ಬೆಳೆಗಳು ಒಣಗುತ್ತಿವೆ. ಕತ್ತೆ ಮೆರವಣಿಗೆ ಮಾಡಿದ್ರೆ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದೇವೆ" ಎಂದು ಹೇಳಿದರು.
ಇದನ್ನೂ ಓದಿ: Selfie Spot: ಮೈಸೂರು ರೈಲ್ವೆ ನಿಲ್ದಾಣದಲ್ಲಿ 'ಸೆಲ್ಫಿ ಸ್ಪಾಟ್' ಉದ್ಘಾಟಿಸಿದ ಪ್ರತಾಪ್ ಸಿಂಹ