ದಾವಣಗೆರೆ: ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಕೃಷಿ ಹಾಗೂ ಮಾರುಕಟ್ಟೆ ಬಗ್ಗೆ ರೈತರು ವಿಶ್ವಾಸವಿಡುವ ಕೆಲಸ ಆಗಿಲ್ಲ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ 'ಈಟಿವಿ ಭಾರತ' ಜೊತೆ ಮಾತನಾಡಿದ ಅವರು, ನರೇಂದ್ರ ಮೋದಿಯವರಿಗೆ ಎರಡನೇ ಭಾರಿ ಜನಾದೇಶ ಸಿಕ್ಕಿದೆ. ಜನರ ನಿರೀಕ್ಷೆ ಪ್ರಮಾಣ ದೊಡ್ಡದಿದೆ. ಮೊದಲು ಬಜೆಟ್ನಲ್ಲಿ ಕೃಷಿ ಆದಾಯ ದ್ವಿಗುಣ ಮಾಡುತ್ತೇವೆ ಎಂದಿದ್ದರು. ಆದರೆ ಐದು ವರ್ಷ ಕಳೆದರು ಏನು ಆಗಿಲ್ಲ. ಈಗ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು, ಮೊದಲ ಬಜೆಟ್ನಲ್ಲಿ 2022ಕ್ಕೆ ಕೃಷಿ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸಾದ್ಯವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ವ್ಯಂಗ್ಯವಾಡಿದರು.
ಕೃಷಿಕರಿಗೆ ತಾಂತ್ರಿಕತೆ ಅಗತ್ಯವಿಲ್ಲ. ಮಾರುಕಟ್ಟೆ ವಿಷಯದಲ್ಲಿ ಬೆಳೆಗಳ ಬೆಲೆ ಕುಸಿದಾಗ ಸರ್ಕಾರ ಮಧ್ಯ ಪ್ರವೇಶಿಸಿ ಆವರ್ತ ನಿಧಿ ಸ್ಥಾಪಿಸುವಂತಹ ಕೆಲಸ ಆಗಬೇಕಿತ್ತು. ಆದರೆ ಕೃಷಿ ಹಾಗೂ ಮಾರುಕಟ್ಟೆ ಬಗ್ಗೆ ವಿಶ್ವಾಸವಿಡುವಂತಹ ಕೆಲಸ ಮಾಡಿಲ್ಲ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನುವ ದೊಡ್ಡ ಯೋಜನೆ ಎಂದು ಬಿಂಬಿಸಲಾಗಿದೆ. ಆದರೆ ಇದು ರೈತರ ಸ್ಥಿತಿ ಅಣಕಿಸುವಂತಿದೆ ಎಂದರು.
ಬಜೆಟ್ - ಕೈಗಾರಿಕೋದ್ಯಮಿಗಳನ್ನು ಹಾಡಿ ಹೊಗಳುವ ಪುಸ್ತಕದಂತಿದೆ: ಡಿ .ಬಸವರಾಜ್
ಕೇಂದ್ರ ಸರ್ಕಾರದ ಬಜೆಟ್ ಕೈಗಾರಿಕೋದ್ಯಮಿಗಳನ್ನು ಹಾಡಿ ಹೊಗಳುವ ಪುಸ್ತಕದಂತಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಡಿ .ಬಸವರಾಜ್ ಹೇಳಿದ್ದಾರೆ.
ಈಟಿವಿ ಭಾರತ ಜೊತೆ ಮಾತನಾಡಿದ ಅವರು, ಇಂದಿರಾ ಗಾಂಧಿ ಬಳಿಕ 50 ವರ್ಷಗಳ ನಂತರ ಒಬ್ಬ ಮಹಿಳೆ ಬಜೆಟ್ ಮಂಡನೆ ಮಾಡಿದ್ದು, ಅದರ ಮೇಲೆ ಜನರು ಹೆಚ್ಚಿನ ನಿರೀಕ್ಷೆ ಇಟ್ಟಿದ್ದರು. ಆದರೆ ಬಡವರ, ರೈತರ ವಿರುದ್ಧವಾಗಿ ಬಜೆಟ್ ಮಂಡನೆ ಮಾಡಿದ್ದಾರೆ. ಕೈಗಾರಿಕೋದ್ಯಮಿಗಳ ಪರವಾಗಿ ಬಜೆಟ್ ಮಂಡನೆಯಾಗಿದೆ. ಮತ್ತೆ ಪೆಟ್ರೋಲ್ ಬೆಲೆ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕಲಾಗಿದೆ ಎಂದರು.
ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿರುವ ನಿರ್ಮಲಾ ಸಿತಾರಾಮನ್ ಅವರು ರಾಜ್ಯಕ್ಕೆ ಯಾವುದೇ ಹೊಸ ಯೋಜನೆ ನೀಡಿಲ್ಲ. ರಾಜ್ಯದಿಂದ 25 ಬಿಜೆಪಿ ಸಂಸದರನ್ನು ಆರಿಸಿ ಕಳಿಸಿದ್ದ ಜನರು ಈಗ ಪಶ್ಚಾತಾಪ ಪಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.