ದಾವಣಗೆರೆ: ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ನಮ್ಮದು ಬಿಡಿ ಸ್ವತಃ ಬಿಜೆಪಿ ಶಾಸಕರೇ ಅವರ ಪಕ್ಷದವರೇ ಆದ ಸಚಿವರಿಗೆ ದುಡ್ಡು ಕೊಟ್ಟು ಅನುದಾನ ಬಿಡುಗಡೆ ಮಾಡಿಸಿಕೊಳ್ಳುವ ಸ್ಥಿತಿ ಇದೆ ಎಂದು ಹರಿಹರದ ಕಾಂಗ್ರೆಸ್ ಶಾಸಕ ಎಸ್. ರಾಮಪ್ಪ ಅವರು ಗಂಭೀರ ಆರೋಪ ಮಾಡಿದರು.
ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿ ನಡೆದ ಕಾರ್ಮಿಕ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸಕ್ತ ಸರ್ಕಾರದಲ್ಲಿ ದುಡ್ಡಿಲ್ಲದೆ ಏನೂ ಕೆಲಸ ಆಗುತ್ತಿಲ್ಲ. ಬಿಜೆಪಿ ಶಾಸಕರೇ ದುಡ್ಡುಕೊಟ್ಟು ಕಾಮಗಾರಿ ಪಡೆಯುವಾಗ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಎಲ್ಲಿ ಅನುದಾನ ಸಿಗಬೇಕು. ಬಿಜೆಪಿಯವರು ಭ್ರಷ್ಟಾಚಾರ ಹಾಗೂ ಜಾತಿ ಧರ್ಮಗಳ ನಡುವೆ ಜಗಳ ಹಚ್ಚುವುದನ್ನ ಬಿಟ್ಟು ಏನು ಮಾಡುತ್ತಿಲ್ಲ. ಸರ್ವಜನಾಂಗದವರು ಸಹೋದರರಂತೆ ಬಾಳಬೇಕಾದ್ರೆ ಕಾಂಗ್ರೆಸ್ ಸರ್ಕಾರ ರಾಜ್ಯ ಹಾಗೂ ರಾಷ್ಟ್ರದಲ್ಲಿ ಬರಬೇಕು ಎಂದು ಶಾಸಕ ರಾಮಪ್ಪ ಜನರಲ್ಲಿ ಕರೆ ನೀಡಿದರು.
ಮೋದಿಯವರು ಬರೀ ಸುಳ್ಳು ಹೇಳುವ ಪ್ರಧಾನಿ.. ಪ್ರಧಾನಿ ನರೇಂದ್ರ ಮೋದಿಯವರು ಬರೀ ಸುಳ್ಳು ಹೇಳುವ ಪ್ರಧಾನಿ. ಅವರು ಪ್ರಧಾನಿಯಾಗಿ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ದಿನಸಿ ವಸ್ತು, ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆಗೆ ಬೆಲೆ ಏರಿಕೆಯಾಗಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡಿಸಲು ಮೋದಿಯವರಿಂದ ಆಗಿಲ್ಲ. ಹಿಜಾಬ್, ಹಲಾಲ್, ಜಟ್ಕಾ ಕಟ್ ನಂತಹ ವಿಚಾರಗಳ ಕಡೆ ಸರ್ಕಾರ ಫೋಕಸ್ ಮಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಸಣ್ಣ ಸಮಾಜದ ಯುವಕ. ಹರ್ಷನ ವಿಚಾರ ಇಟ್ಟುಕೊಂಡು ಕೋಮುದ್ವೇಷ ಹೆಚ್ಚಿಸುವುದು ಸರ್ಕಾರದ ಕೆಲಸ ಆಗಿತ್ತು. ಬಡ ಹಿಂದುಳಿದ ಸಮಾಜದ ಮಕ್ಕಳನ್ನು ಮುಂದೆ ಬಿಟ್ಟು ಹಿಂದೂ ಮುಸ್ಲಿಂರ ಮಧ್ಯೆ ಗಲಾಟೆ ಮಾಡಿಸುವುದು ಬಿಜೆಪಿಯವರ ಕೆಲಸ ಆಗಿದೆ. ಹೀಗೆ ಆದ್ರೆ ಶ್ರೀಲಂಕಾ, ಪಾಕಿಸ್ತಾನ ದಿವಾಳಿಯಾಗಿವೆ. ಮೂರನೇ ರಾಷ್ಟ್ರ ನಮ್ಮ ಭಾರತ ದಿವಾಳಿ ಆಗಲಿದೆ. ದೇಶ ದಿವಾಳಿ ಆಗುವ ಮುನ್ನ ಬಿಜೆಪಿಯನ್ನು ತೊಲಗಿಸಬೇಕಾಗಿದೆ. ಈ ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರ ಒಲವು ಇರುವ ಸರ್ಕಾರ ಎಂದು ದೂರಿದರು.
ಓದಿ: ಬಸವಣ್ಣನ ವಿಚಾರ ಕೈ ಬಿಟ್ಟಿಲ್ಲ, ಪೂರ್ಣ ಮಾಡಿದ್ದೇವೆ: ಸಚಿವ ಬಿ. ಸಿ ನಾಗೇಶ್ ಸ್ಪಷ್ಟನೆ