ದಾವಣಗೆರೆ: ಕಾಂಗ್ರೆಸ್ ಪಕ್ಷಕ್ಕೆ ಸಂಬಂಧವಿಲ್ಲದ ಹಣವಂತರಿಗೆ ಟಿಕೆಟ್ ನೀಡಿದೆ, ಹಣವಂತರನ್ನೇ ಹುಡುಕಿ ಹುಡುಕಿ ಅಭ್ಯರ್ಥಿಯನ್ನಾಗಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು.
ದಾವಣಗೆರೆಯ ಶಿರಮಗೊಂಡನಹಳ್ಳಿಯಲ್ಲಿ ಮಾತನಾಡಿದ ಅವರು ರಾಜಕೀಯ, ಗ್ರಾಮೀಣ ಜನರ ಸಮಸ್ಯೆಗಳ ಗಾಳಿ ಗಂಧವಿಲ್ಲದ ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಹಣಬಲದಿಂದ ವಿಧಾನ ಪರಿಷತ್ ಚುನಾವಣೆ ಗೆಲ್ಲಲು ಕಾಂಗ್ರೆಸ್ ಹವಣಿಸುತ್ತಿದೆ, ಬಿಜೆಪಿಗೆ ಮತ ನೀಡಿ ಮತದಾರ ಅವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಸಚಿವ ಈಶ್ವರಪ್ಪ ಮನವಿ ಮಾಡಿದರು.
ಜೆಡಿಎಸ್ ಜತೆ ಹೊಂದಾಣಿಕೆ ವಿಚಾರ:
ಜೆಡಿಎಸ್ ಜತೆ ಹೊಂದಾಣಿಕೆ ಪ್ರಶ್ನೆ ಬರಲ್ಲ, ಅವರು 7 ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ, ಮೇಲಾಗಿ ಜೆಡಿಎಸ್ ಕಾಂಗ್ರೆಸ್ನ್ನು ವಿರೋಧಿಸುತ್ತಿದೆ, ಉಳಿದ ಸ್ಥಾನಗಳಲ್ಲಿ ಅವರು ಬಿಜೆಪಿ ಬೆಂಬಲಿಸುವ ನಂಬಿಕೆ ಇದೆ. ಕಾಂಗ್ರೆಸ್ ಅನ್ನು ಈಗಾಗಲೇ ಜನ ತಿರಸ್ಕರಿಸಿದ್ದಾರೆ, ಮಾಜಿ ಸಿಎಂ ಬಿಎಸ್ವೈ, ಎಚ್ಡಿಕೆ ಅವರೊಂದಿಗೆ ಚರ್ಚಿಸಿದ್ದಾರೆ, ಜೆಡಿಎಸ್, ಬಿಜೆಪಿಗೆ ಬೆಂಬಲಿಸುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಬಳುವಳಿ:
ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಬಳುವಳಿ ಬಂದಿದೆ ಎಂದು ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದರು. ಭ್ರಷ್ಟ ಅಧಿಕಾರಿಗಳು ಬೆಳೆದಿದ್ದೇ ಕಾಂಗ್ರೆಸ್ ಅವಧಿಯಲ್ಲಿ, ಅದರಲ್ಲೂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಕಾಲದಲ್ಲಿ ಭ್ರಷ್ಟಾಚಾರದ ಬಳುವಳಿಯಾಗಿ ಬಂದಿದೆ. ಅವರ ಕಾಲದಲ್ಲಿ ಭ್ರಷ್ಟಾಚಾರ ಆಗಿದೆ ಎಂದರೆ ನಾವು ಸುಮ್ಮನೆ ಕೂರಲು ಆಗಲ್ಲ, ಭ್ರಷ್ಟಾಚಾರ ನಿರ್ಮೂಲನೆಗೆ ಬಿಜೆಪಿ ಪ್ರಯತ್ನಿಸುತ್ತಿದೆ.
ಈ ಹಿನ್ನೆಲೆ ಬಿಜೆಪಿ ಸರ್ಕಾರ, ಎಸಿಬಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಎಸಿಬಿ ಇನ್ನಷ್ಟು ಬಿಗಿಯಾಗಿ ಭ್ರಷ್ಟರನ್ನು ಮಟ್ಟ ಹಾಕಬೇಕಾಗಿದೆ. ಇದರಿಂದ ರಾಜ್ಯ ಹಾಗೂ ರಾಷ್ಟ್ರಕ್ಕೆ ಒಳ್ಳೆಯದಾಗುತ್ತದೆ ಎಂದರು.
ಜಿಲ್ಲಾ ಹಾಗು ತಾಲೂಕು ಪಂಚಾಯಿತಿ ಚುನಾವಣೆ...?
ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಈಗಾಗಲೇ ಲಕ್ಷ್ಮೀನಾರಾಯಣ್ ಅವರ ನೇತೃತ್ವದ ಅಧ್ಯಕ್ಷತೆಯಲ್ಲಿ ಸಮಿತಿ ನೇಮಕ ಮಾಡಲಾಗಿದೆ. ಡಿ ಲಿಮಿಟೇಷನ್ ತೀರ್ಮಾನವನ್ನು ಅವರು ಬೇಗ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಫೆಬ್ರವರಿ ತಿಂಗಳಿನಲ್ಲಿ ಚುನಾವಣೆ ಆಗಬಹುದೆಂದು ತಿಳಿಸಿದರು.