ದಾವಣಗೆರೆ: ಕುರುಬ ಸಮಾಜದ ಪರಮಪೂಜ್ಯರಿಗೆ ಅಗೌರವ ತೋರಿರುವ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿಯವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಅಗ್ರಹಿಸಿ ದಾವಣಗೆರೆಯಲ್ಲಿ ಹಾಲುಮತ ಮಹಾಸಭಾ ವತಿಯಿಂದ ಆಕ್ರೋಶ ವ್ಯಕ್ತಪಡಿಸಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ಆಕ್ರೋಶ ವ್ಯಕ್ತಪಡಿಸಿದ ಹಾಲುಮತ ಮಹಾಸಭಾ ಕಾರ್ಯಕರ್ತರು, ರಾಜ್ಯ ಸರ್ಕಾರದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿಯವರು ಜವಾಬ್ದಾರಿಯುವ ಸ್ಥಾನದಲ್ಲಿದ್ದಾರೆ, ತಾಳ್ಮೆಯಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿತ್ತು. ಆದರೆ ಉದ್ದಟತನ ಮೆರೆದು ಬೇಜಾವಾಬ್ದಾರಿ ತೋರಿದ್ದಾರೆ, ಅವರೇ ನೇರವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರ್ನಲ್ಲಿ ಶ್ರೀಕನಕದಾಸ ಸರ್ಕಲ್ ಬಗ್ಗೆ ಗೊಂದಲ ಮೂಡಿತ್ತು. ಈ ಹಿನ್ನಲೆ ಕುರುಬ ಸಮಾಜದ ಪರಮಪೂಜ್ಯರು, ಸಮಾಜದ ಹಿರಿಯರು, ಯುವಕರ ಶಾಂತಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಮಾಧುಸ್ವಾಮಿಯವರು, ಸಮಸ್ಯೆಗೆ ಸೌಜನ್ಯದಿಂದ ಪರಿಹಾರ ಹುಡುಕಬೇಕಿತ್ತು. ಆದರೆ ತಾಳ್ಮೆ ಕಳೆದುಕೊಂಡ ಸಚಿವರು ಸಮಾಜದ ಪರಮಪೂಜ್ಯರಿಗೆ ಏಕವಚನದಲ್ಲಿ ಅಗೌರವ ತೋರಿದ್ದಾರೆ ಎಂದು ದೂರಿದರು.
ಈ ಬಗ್ಗೆ ಕುರುಬ ಸಮಾಜದವರು ಸಚಿವರಿಗೆ ಸ್ಪಷ್ಠಿಕರಣ ಕೇಳಿದರೆ, ತನ್ನನ್ನು ತಾನು ಒಂದು ಸಮಾಜದ ನಾಯಕರೆಂದು, ಬೇರೆ ಸಮಾಜದ ಬಗ್ಗೆ ನನಗೆ ಆಸಕ್ತಿ ಇಲ್ಲವೆಂಬಂತೆ ಉದ್ದಟತನದ ಮಾತುಗಳನ್ನು ಆಡಿದ್ದಾರೆ. ಸಚಿವರಾಗುವಾಗ ಎಲ್ಲಾ ಸಮಾಜದವರನ್ನು ಸಮಾನ ಗೌರವದಿಂದ ಕಾಣುತ್ತೇನೆ ಎಂದು ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ. ಆದರೆ ಅವರು ಜಾತಿ ಜಾತಿಗಳ ಮಧ್ಯೆ ದ್ವೇಷ ಉಂಟು ಮಾಡುತ್ತಿದ್ದಾರೆ. ಈ ಹಿನ್ನಲೆ ರಾಜ್ಯಪಾಲರು ಸಚಿವ ಸ್ಥಾನದಿಂದ ಮಾಧುಸ್ವಾಮಿಯವರನ್ನು ವಜಾಗೊಳಿಸಬೇಕು ಎಂದು ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕರಾದ ರಾಜೂ ಮೌರ್ಯ ಆಗ್ರಹಿಸಿದ್ದಾರೆ.