ದಾವಣಗೆರೆ: ಬುದ್ಧಿಮಾಂದ್ಯತೆ, ಅಸಮರ್ಥ್ಯತೆಯುಳ್ಳ ಮಕ್ಕಳಿಂದ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ ಎಂಬ ಮನೋಭಾವವನ್ನು ಹೊಂದಿರುವ ಜನರೇ ಹೆಚ್ಚು. ಆದರೆ, ಜನರ ಇಂತಹ ಮನೋಧೋರಣೆಯನ್ನು ಬದಲಾಯಿಸಲು ಬುದ್ಧಿಮಾಂದ್ಯ ಯುವಕನೊಬ್ಬ ಸಾಧನೆ ಮಾಡಿ ತೋರಿಸಿದ್ದಾನೆ. ದಾವಣಗೆರೆ ಜಿಲ್ಲೆಯ ಸುಶ್ರುತ್ ಎಂಬ ಯುವಕ ಬುದ್ಧಿಮಾಂದ್ಯತೆಯಿಂದ ಕೂಡಿದ್ದರೂ ಸಾಧನೆ ಮಾಡಿ, ಅಂತಾರಾಷ್ಟ್ರೀಯ ಮಟ್ಟದ ಸ್ಪೆಷಲ್ ಒಲಂಪಿಕ್ಸ್ ಸೈಕ್ಲಿಂಗ್ಗೆ ಆಯ್ಕೆಯಾಗಿ ರಾಜ್ಯ ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾನೆ.
ದಾವಣಗೆರೆ ಜಿಲ್ಲೆಯ ಹರಿಹರದ ನಿವಾಸಿ ಮಂಜುನಾಥ್ ಹಾಗೂ ಮಮತಾ ಅವರ ಪುತ್ರ ಸುಶ್ರುತ್ ಬುದ್ಧಿಮಾಂದ್ಯತೆಯಿಂದ ಕೂಡಿದ್ದರು ಕೂಡ ಶ್ರಮ ವಹಿಸಿ ತರಬೇತಿ ಪಡೆದು ಅಂತಾರಾಷ್ಟ್ರೀಯ ಮಟ್ಟದ ಸ್ಪೇಷಲ್ ಒಲಂಪಿಕ್ಸ್ ಸೈಕ್ಲಿಂಗ್ಗೆ ಆಯ್ಕೆಯಾಗಿ ಹೆತ್ತವರಿಗೆ ಕೀರ್ತಿ ತಂದಿದ್ದಾನೆ. ಯುವಕ ಸುಶ್ರುತ್ ಬುದ್ಧಿಮಾಂದ್ಯತೆಯಿಂದ ಕೂಡಿದ್ದರಿಂದ ವಿಶೇಷ ತರಬೇತಿಗಾಗಿ 2013 ರಲ್ಲಿ ಪೋಷಕರು 'ಸಂವೇದ ಎಂಬ ವಿಶೇಷ ಶಾಲೆಗೆ(ಬೌದ್ಧಿಕ ಸವಾಲನ್ನೆದುರಿಸುತ್ತಿರುವ ಮಕ್ಕಳಿಗಾಗಿ) ದಾಖಲು ಮಾಡಿದ್ದರು.
ಆ ಶಾಲೆಗೆ ದಾಖಲಾದ ಬಳಿಕ ಅಲ್ಲಿನ ದೈಹಿಕ ಶಿಕ್ಷಕರಾದ ದಾದಾಪೀರ್ ಅವರ ಗರಡಿಯಲ್ಲಿ ತರಬೇತಿ ಪಡೆದು ವಿಶೇಷ ಸಾಧನೆ ಮಾಡಿದ್ದಾನೆ. ತರಬೇತಿ ನಿಡುತ್ತಿರುವ ವೇಳೆ ಸುಶ್ರುತ್ ಮೇಲೆ ಹೆಚ್ಚು ನಿಗಾವಹಿಸಿದ ದಾದಾಪೀರ್ ಅವರು ಹೆಚ್ಚಾಗಿ ಸೈಕ್ಲಿಂಗ್ ತರಬೇತಿಯನ್ನು ಕೊಟ್ಟು ಉತ್ತುಂಗಕ್ಕೇರುವಂತೆ ಮಾಡಿದ್ದಾರೆ.
ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ಸುಶ್ರುತ್: ಸುಶ್ರುತ್ 2021 ನವಂಬರ್ನಲ್ಲಿ ಮಂಗಳೂರಿನಲ್ಲಿ ನಡೆದ ಸ್ಪೆಷಲ್ ಒಲಂಪಿಕ್ಸ್ ರಾಜ್ಯಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ 5 ಕಿ ಮೀ ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದ. ಬಳಿಕ 2022 ಜುಲೈ 21 ರಿಂದ 24 ರವರೆಗೆ ಜಾರ್ಖಂಡ್ನ ಬೊಕಾರೋ ದಲ್ಲಿ ಜರುಗಿದ ರಾಷ್ಟ್ರಮಟ್ಟದ ಸೈಕ್ಲಿಂಗ್ ಚಾಂಪಿಯನ್ ಶಿಪ್ನಲ್ಲಿ ಕರ್ನಾಟಕ ರಾಜ್ಯದಿಂದ ಒಟ್ಟು ವಿವಿಧ ವಯಸ್ಸಿನ 8 ಮಕ್ಕಳು ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈ ಕ್ರೀಡಾಕೂಟದ 5 ಕಿ ಮೀ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದ. ಬಳಿಕ ಮೂರು ನ್ಯಾಷನಲ್ ಕೋಚಿಂಗ್ ಕ್ಯಾಂಪ್ಗಳಲ್ಲಿ ಭಾಗವಹಿಸಿದ ಯುವಕ 2023 ಜೂನ್ 12 ರಿಂದ 26 ರವರೆಗೆ ಜರ್ಮನಿಯ ಬರ್ಲಿನ್ನಲ್ಲಿ ಜರಗುವ ಅಂತಾರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾನೆ ಎಂದು ಸುಶ್ರುತ್ ಅವರ ತಂದೆ ಮಂಜುನಾಥ್ ಹರ್ಷ ವ್ಯಕ್ತಪಡಿಸಿದ್ದಾರೆ.
ಏನಿದು ಸ್ಪೆಷಲ್ ಒಲಂಪಿಕ್ಸ್?: ಸ್ಪೆಷಲ್ ಒಲಂಪಿಕ್ಸ್ ಇದೊಂದು ಅಂತಾರಾಷ್ಟ್ರೀಯ ಮಟ್ಟದ ವಿಶೇಷ ಮಕ್ಕಳ ಶ್ರೇಯೋಭಿಲಾಷೆಗಾಗಿ ಇರುವ ಸಂಸ್ಥೆಯಾಗಿದೆ. ವಿಶೇಷ ಅಗತ್ಯತೆಯುಳ್ಳ ಮಕ್ಕಳಾದ ಬುದ್ಧಿ ಶಕ್ತಿಯಲ್ಲಿ ಕೊರತೆ, ಮೆದುಳಿನ ಪಾರ್ಶ್ವವಾಯು, ಆಟಿಸಂ ಮತ್ತು ಬಹು ವಿಧದ ನ್ಯೂನತೆಯುಳ್ಳವರಿಗೆ ಆಟೋಟಗಳನ್ನು ನಡೆಸುವ ಸಂಸ್ಥೆಯಾಗಿದೆ. ಪ್ರತಿಯೊಂದು ದೇಶದಲ್ಲಿಯೂ ಇದರ ಅಂಗ ಸಂಸ್ಥೆ ಇರುತ್ತದೆ. ರಾಷ್ಟ್ರಮಟ್ಟದಲ್ಲಿ ಸ್ಪೆಷಲ್ ಒಲಂಪಿಕ್ಸ್ -ಭಾರತ್ ಈ ಆಟೋಟಗಳನ್ನು ನಡೆಸುತ್ತದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸ್ಪೆಷಲ್ ಒಲಂಪಿಕ್ಸ್ ಭಾರತ-ಕರ್ನಾಟಕ ಈ ಆಟೋಟಗಳನ್ನು ನಡೆಸುತ್ತ ಬಂದಿದೆ.
ಇದನ್ನೂ ಓದಿ: ಹಾವೇರಿಯಲ್ಲಿದೆ ಸುಸಜ್ಜಿತ ಅತ್ಯಾಧುನಿಕ ಗ್ರಂಥಾಲಯ: ಜ್ಞಾನದ ಹಸಿವು ನೀಗಿಸುತ್ತಿವೆ ಈ ಗ್ರಂಥ ಭಂಡಾರ