ದಾವಣಗೆರೆ: ವೀರಶೈವ ಲಿಂಗಾಯತ ಸಮುದಾಯಕ್ಕೆ ಯಾವುದೇ ರೀತಿಯ ಅವಹೇಳನ ಮಾಡಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ನಾನು ಕ್ಷಮೆ ಕೇಳುವುದಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆ ಉಸಿರು ಇರುವವರೆಗೆ ಕ್ಷಮೆಯಾಚಿಸುವುದಿಲ್ಲ. ನಾನು ಕ್ಷಮೆ ಕೇಳಿದರೆ ನನ್ನ ಸಮಾಜ ಒತ್ತೆ ಇಟ್ಟಂತೆ ಮತ್ತು ಅಪಮಾನ ಮಾಡಿದಂತಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಮತ್ತು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೈ. ರಾಮಪ್ಪ ಸ್ಪಷ್ಟನೆ ನೀಡಿದ್ದಾರೆ.
ದಾವಣಗೆರೆ ವರದಿಗಾರರ ಕೂಟಕ್ಕೆ ಪೊಲೀಸ್ ಭದ್ರತೆಯೊಂದಿಗೆ ಆಗಮಿಸಿದ ಅವರು ಪತ್ರಿಕಾಗೋಷ್ಠಿ ನಡೆಸಿ, ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ನಾನು ಮಾತನಾಡಿರುವ ವಿಡಿಯೋದಲ್ಲಿ ಎಲ್ಲಿಯೂ ವೀರಶೈವ, ಲಿಂಗಾಯತ ಎಂಬ ಶಬ್ಧ ಇಲ್ಲ. ಆದರೂ ನನ್ನ ವಿರುದ್ಧ ಪೂರ್ವ ನಿಯೋಜಿತವಾಗಿ ರಾಜಕೀಯ ಒಳಸಂಚು ನಡೆಸಿ, ತೇಜೋವಧೆಗೆ ಯತ್ನಿಸಲಾಗಿದೆ ಎಂದು ಆರೋಪಿಸಿದರು.
ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಹೆಚ್. ಬಿ. ಮಂಜಪ್ಪರನ್ನ ಬೆಂಬಲಿಸಿ ಮತ ಹಾಕುವಂತೆ ಮನವಿ ಮಾಡಿಕೊಳ್ಳುತ್ತಿದ್ದೆ. ಈ ವೇಳೆ ನೇರ್ಲಗಿ ಗ್ರಾಮದಲ್ಲಿ ಮಾತಿನ ಚಕಮಕಿ ಸಂತೋಷ್ ಎಂಬಾತನ ಜೊತೆ ನಡೆಯಿತು.ಆದರೆ, ವೀರಶೈವ ಲಿಂಗಾಯತರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ಆದರೂ ಕೆಲವರು ಇದನ್ನೇ ದೊಡ್ಡ ವಿಷಯವನ್ನಾಗಿ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ವೇಳೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಅಂಬೇಡ್ಕರ್ ಗೆ ಗೌರವ ಸೂಚಿಸಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು.
ನನ್ನ ಬಳಿ ಕ್ಷಮೆಯಾಚಿಸದಿದ್ದರೆ ಅಹಿಂದ ಕ್ರಾಂತಿ..!
ಪ್ರತಿಭಟನೆ ವೇಳೆ ನನ್ನ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದಿದ್ದಾರೆ. ಮುಖಕ್ಕೆ ಮಸಿ ಬಳಿದು ಕೆಲವರು ಅವಮಾನ ಮಾಡಿದ್ದಾರೆ. ನಾನು ಬದುಕಿದ್ದಾಗಲೇ ಮಾನಸಿಕವಾಗಿ ಕೊಂದು ಹಾಕಿದ್ದಾರೆ. ಹಾಗಾಗಿ ಪ್ರತಿಭಟನೆ ನಡೆಸಿದವರೇ ನನ್ನ ಬಳಿ ಬಂದು ನಾಳೆಯೊಳಗೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅಹಿಂದ ಕ್ರಾಂತಿಯಾಗುತ್ತದೆ. ಅಹಿಂದ ವರ್ಗವು ಜಿಲ್ಲೆಯಲ್ಲಿ ದೊಡ್ಡಮಟ್ಟದ ಚಳವಳಿ ನಡೆಸಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.
ಸಿರಿಗೆರೆ ಸ್ವಾಮೀಜಿಯವರು ಕೇಳಿದರೂ ಇದೇ ನನ್ನ ಉತ್ತರವಾಗಿರಲಿದೆ. ನಾನು ತಪ್ಪು ಮಾಡಿಲ್ಲ ಎಂದು ಹೇಳಿದ ಮೇಲೆ ಯಾಕೆ ಹೆದರಬೇಕು. ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಕೆಲವರು ಹೇಳಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು. ನನ್ನ ವಿಡಿಯೋ ನೋಡಿ ಸ್ಪಷ್ಟವಾಗಿ ಮಾತನಾಡಲಿ. ಅದನ್ನು ಬಿಟ್ಟು ಪೂರ್ವಾಗ್ರಹ ಪೀಡಿತರಾಗಿ ಮಾತನಾಡಿರುವ ಕೆಲವರು ಜಾತಿ ಜಾತಿಗಳ ಮಧ್ಯೆ ಕಂದಕ ಸೃಷ್ಟಿಸುವ ಕೆಲಸ ಮಾಡಿದ್ದಾರೆ. ಅಶಾಂತಿ ಸೃಷ್ಟಿಸಲು ನನ್ನ ಹೆಸರು ಬಳಸಿಕೊಂಡು ಈಗಲೇ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ ನಗರದ ಸಿದ್ದಲಿಂಗೇಶ್ವರ ದೇವಸ್ಥಾನದ ಬಳಿ ಬರುತ್ತೇನೆ. ಯಾರೂ ಚಪ್ಪಲಿಯಲ್ಲಿ ಹೊಡೆಯುತ್ತಾರೆ ಎಂಬುದನ್ನು ನೋಡುತ್ತೇನೆ. ನಮ್ಮ ಸಮಾಜದವರು ನನ್ನ ಜೊತೆಯಲ್ಲಿದ್ದಾರೆ. ನನ್ನನ್ನು ತೇಜೋವಧೆ ಮಾಡಿರುವವರ ಬಗ್ಗೆ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇನೆ. ಎಲ್ಲಾ ಹಿಂದುಳಿದ ವರ್ಗಗಳ ಮುಖಂಡರ ಜೊತೆ ಚರ್ಚಿಸಿ ಹೋರಾಟದ ರೂಪುರೇಷೆ ರೂಪಿಸಲಾಗುವುದು ಎಂದು ರಾಮಪ್ಪ ಹೇಳಿದ್ದಾರೆ.
ಪೊಲೀಸ್ ಸೆಕ್ಯುರಿಟಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಮಪ್ಪ..!
ವೈ. ರಾಮಪ್ಪ ಪೊಲೀಸ್ ಭದ್ರತೆ ನಡುವೆ ಪತ್ರಿಕಾಗೋಷ್ಠಿ ನಡೆಸಿದರು. ವರದಿಗಾರರ ಕೂಟಕ್ಕೆ ರಾಮಪ್ಪ ಬರುವವರೆಗೆ ಮತ್ತು ಹೋಗುವವರೆಗೆ ಪೊಲೀಸರು ಭದ್ರತೆ ನೀಡಿದರು. ರಾಮಪ್ಪ ಜೊತೆಗೆ ವಿವಿಧ ಸಮಾಜದ ಮುಖಂಡರು ಆಗಮಿಸಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಭದ್ರತೆಯನ್ನು ಪೊಲೀಸರು ನೀಡಿದ್ದರು.