ದಾವಣಗೆರೆ: ಭಾರೀ ಗಾಳಿ ಮತ್ತು ಮಳೆಯಿಂದಾಗಿ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಇದರಿಂದಾಗಿ ಮಣ್ಣಿನೊಳಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಹರಪನಹಳ್ಳಿ ತಾಲೂಕಿನ ಹಲುವಾಗಲು ಗ್ರಾಮದಲ್ಲಿ ಈ ಅವಘಡ ಸಂಭವಿಸಿದ್ದು, ಆರುಂಡಿ ನಾಗರತ್ನಮ್ಮ (50) ಎಂಬ ಮಹಿಳೆ ಮೃತ ಪಟ್ಟಿದ್ದಾರೆ.
ಹಳೆಯ ಮನೆಯ ಪಕ್ಕದಲ್ಲಿ ಹೊಸ ಮನೆಯನ್ನು ನಾಲ್ಕು ತಿಂಗಳ ಹಿಂದೆ ಕಟ್ಟಿ ಗೃಹ ಪ್ರವೇಶವನ್ನೂ ನೆರವೇರಿಸಿದ್ದರು. ಆದ್ರೆ ಹಳೆಯ ಮನೆಯಲ್ಲಿದ್ದ ಸಾಮಗ್ರಿಗಳನ್ನು ಹೊಸ ಮನೆಗೆ ಶಿಫ್ಟ್ ಮಾಡಿರಲಿಲ್ಲ.
ನಿನ್ನೆ ಸಾಮಗ್ರಿ ತೆಗೆಯುವಾಗ, ಜೋರಾಗಿ ಗಾಳಿ ಬೀಸಿದ್ದರಿಂದಾಗಿ ಇದ್ದಕ್ಕಿದ್ದಂತೆ ಮನೆ ಕುಸಿದು ಬಿದ್ದ ಪರಿಣಾಮ ನಾಗರತ್ನಮ್ಮ ಮಣ್ಣಿನಡಿ ಹೂತು ಹೋಗಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಬಂದು ಮಣ್ಣಿನಡಿ ಸಿಲುಕಿದ್ದ ಮೃತದೇಹವನ್ನು ಹೊರತೆಗೆಯಲು ಹರಸಾಹಸಪಟ್ಟರು. ಈ ಸಂಬಂಧ ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.