ದಾವಣಗೆರೆ: ಎಲ್ಲ ಅಧಿಕಾರಿಗಳು ಸಕಾಲ ಯೋಜನೆಯಡಿ ಬರುವ ಅರ್ಜಿಗಳನ್ನು ನಿರಂತರವಾಗಿ ಅನುಸರಣೆ ಮಾಡಿ ನಿಗದಿತ ಕಾಲಮಿತಿಯೊಳಗೆ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚಿಸಿದರು.
ಜಿಲ್ಲಾಡಳಿತ ಕಚೇರಿಯಲ್ಲಿಂದು ನಡೆದ ಜನಸ್ಪಂದನ ಸಭೆಯಲ್ಲಿ ಸಕಾಲ ವರದಿ ಪರಿಶೀಲಿಸಿ ಅನೇಕ ಇಲಾಖೆಗಳಲ್ಲಿ ಸಕಾಲದಲ್ಲಿ ನಾಗರಿಕರು ಸಲ್ಲಿಸಲಾದ ಅರ್ಜಿಗಳು ಬಾಕಿ ಇದೆ. ಗೊತ್ತು ಮಾಡಿದ ಕಾಲಮಿತಿಯಲ್ಲಿ ನಾಗರಿಕರಿಗೆ ಸೇವೆಗಳನ್ನು ಖಾತ್ರಿ ಪಡಿಸುವುದು ಸಕಾಲದ ಉದ್ದೇಶವಾಗಿದ್ದು, ಪ್ರತಿ ಸಭೆಯಲ್ಲಿ ಸಕಾಲ ಬಾಕಿ ಇಟ್ಟುಕೊಳ್ಳಬಾರದೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ 3, ಪೊಲೀಸ್ ಇಲಾಖೆಯಲ್ಲಿ 11, ಕಂದಾಯ ಇಲಾಖೆಯಲ್ಲಿ 15, ಹೊನ್ನಾಳಿ ನಗರ ಪಂಚಾಯತ್ನಲ್ಲಿ 7, ಆರ್ಟಿಒದಲ್ಲಿ 13 ಹೀಗೆ ವಿವಿಧ ಇಲಾಖೆಗಳಲ್ಲಿ ಅರ್ಜಿಗಳು ಬಾಕಿ ಇವೆ. ಅನೇಕ ಇಲಾಖೆಗಳಿಗೆ ನೋಟಿಸ್ ನೀಡಿದರೂ ಕ್ರಮ ಕೈಗೊಂಡಿಲ್ಲ. ಕೆಲವರು ನೋಟಿಸ್ಗೆ ಉತ್ತರವನ್ನೂ ಕೊಡದಷ್ಟು ಅಸಡ್ಡೆ ತೋರಿದ್ದಾರೆ. ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಗೆ ಬಂದ ತಕ್ಷಣ ಸಕಾಲ ಪರಿಶೀಲಿಸಿ ಸಕಾಲ ಬಾಕಿ ಅರ್ಜಿ ಕ್ಲಿಯರ್ ಮಾಡಬೇಕು. ಮುಖ್ಯಮಂತ್ರಿಯವರು ಸಹ ಸಭೆಗಳಲ್ಲಿ ಸಕಾಲ ಪ್ರಗತಿ ಪರಿಶೀಲನೆ ನಡೆಸುತ್ತಾರೆ. ಆದ್ದರಿಂದ ಎಲ್ಲ ಅಧಿಕಾರಿಗಳು ಸಕಾಲವನ್ನು ನಿರಂತರವಾಗಿ ಅನುಸರಣೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದರು.
ಜನಸ್ಪಂದನ ಸಭೆಗೆ ಬೇರೆ ಬೇರೆ ಊರುಗಳಿಂದ ಜನರು ಬಂದು ಮನವಿ ಮತ್ತು ದೂರುಗಳನ್ನು ನೀಡುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಠಿಯಿಂದ ಇನ್ಮುಂದೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಹಶಿಲ್ದಾರ್ ನೇತೃತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಹಭಾಗಿತ್ವದೊಂದಿಗೆ ಜನಸ್ಪಂದನ ಸಭೆಗಳನ್ನು ನಡೆಸುವಂತೆ ತಿಳಿಸಿದರು.