ದಾವಣಗೆರೆ: ಧಾರಾಕಾರ ಮಳೆ ಸುರಿದ ಪರಿಣಾಮ ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದೇವರ ಬೆಳಕೆರೆಯ ಪಿಕಪ್ ಡ್ಯಾಂ ಭರ್ತಿಯಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದು, ಕೆರೆಗೆ ನಿರ್ಮಾಣ ಮಾಡಿರುವ ಪಿಕಪ್ ಡ್ಯಾಂ. ಮಳೆ ಹೆಚ್ಚಾಗಿದ್ದರಿಂದ ಇಲ್ಲಿ ಸ್ವರ್ಗವೇ ಧರೆಗಿಳಿದಂತೆ ಪ್ರವಾಸಿಗರಿಗೆ ಭಾಸವಾಗುತ್ತಿದೆ. ಹೆಚ್ಚಿನ ನೀರು ಹರಿದು ಬರುತ್ತಿರುವುದ್ದರಿಂದ ಹಾಲಿನ ನೊರೆಯಂತೆ ಅ ಡ್ಯಾಂನಿಂದ ನೀರು ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ದೇವರಬೆಳೆಕೆರೆ ಡ್ಯಾಂನತ್ತ ಪ್ರವಾಸಿಗರು:
ಈ ಭಾಗದ ರೈತರಿಗೆ ಅನುಕೂಲ ಆಗಲಿ ಎಂದು ಪಿಕಪ್ ಡ್ಯಾಂ ಅನ್ನು 50 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು. ಶ್ಯಾಗಳೆ ಹಳ್ಳಕ್ಕೆ ಕಟ್ಟಿದ ಡ್ಯಾಂನಿಂದ ಹಾಲ್ನೊರೆಯಂತೆ ನೀರು ಧುಮ್ಮಿಕ್ಕುವ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ದೇವರಬೆಳೆಕೆರೆ ಡ್ಯಾಂನತ್ತ ಲಗ್ಗೆ ಇಡುತ್ತಿದ್ದಾರೆ.
ಮೂಲ ಸೌಕರ್ಯಗಳಿಲ್ಲ:
ಆದ್ರೆ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಯಾವುದೇ ಮೂಲ ಸೌಕರ್ಯಗಳಿಲ್ಲ ಎಂಬುದು ಬೇಸರ ಸಂಗತಿಯಾಗಿದೆ. ಡ್ಯಾಂಗೆ ಸಂಬಂಧಿಸಿದ ಐವತ್ತು ಎಕರೆ ವಿಶಾಲವಾದ ಭೂಮಿ ಇದ್ದರೂ ಪಾರ್ಕ್ ಆಗಲಿ ಅಥವಾ ಕುಳಿತುಕೊಲ್ಳಲು ಆಸನಗಳಾಗಲಿ ಯಾವುದೂ ಇಲ್ಲ. ಇಲ್ಲಿಗೆ ಬಂದವರಿಗೆ ಕುಡಿಯೋಕೆ ನೀರು ಸಿಗಲ್ಲ. ಶೌಚಾಲಯ, ರಸ್ತೆಗಳಲ್ಲಿ ವಿದ್ಯುತ್ ದೀಪಗಳು ಮರೀಚಿಕೆಯಾಗಿದೆ.
ಇನ್ನು ಸಾವಿರಾರು ಎಕರೆ ಜಮೀನಿಗೆ ನೀರುಣಿಸುವ ಕೆರೆ ಇದಾಗಿದ್ದು, ಹೂಳಿನಿಂದ ತುಂಬಿಕೊಂಡಿದ್ದರೂ ಕೂಡ ಅಧಿಕಾರಿಗಳು ಮಾತ್ರ ಇತ್ತ ಗಮನ ಕೊಡಲ್ಲ ಅಂತ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಡ್ಯಾಂ ಅನ್ನು ಅಭಿವೃದ್ಧಿಪಡಿಸಿ ಪ್ರವಾಸಿ ಕೇಂದ್ರ ಮಾಡಬೇಕು ಎನ್ನುವ ಗ್ರಾಮಸ್ಥರ ಕನಸು ನನಸಾಗಿಲ್ಲ.
ಇದನ್ನೂ ಓದಿ: ಹೊತ್ತಲ್ಲದ ಹೊತ್ತಲ್ಲೂ ಈ ಮರದ ದಿಣ್ಣೆಯೇ ಇವರಿಗೆ ದಾರಿ.. ಹೇಳೋರು-ಕೇಳೋರಿಲ್ಲವೇ?
ಈ ಡ್ಯಾಂ ಅನ್ನು ಅಭಿವೃದ್ಧಿಪಡಿಸಿ ದಾವಣಗೆರೆಯ ಪ್ರವಾಸಿತಾಣಗಳ ಸಾಲಿಗೆ ಸೇರಿಸಬೇಕಾಗಿದೆ.