ದಾವಣಗೆರೆ: ಪೌರ ಕಾರ್ಮಿಕರ ಗೃಹ ನಿರ್ಮಾಣ ಕಾರ್ಯವು 3-4 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಶೀಘ್ರ ಪೌರ ಕಾರ್ಮಿಕರಿಗೆ ಮನೆಗಳನ್ನ ಹಸ್ತಾಂತರಿಸಲಾಗುವುದು ಎಂದು ಮೇಯರ್ ಬಿ ಜಿ ಅಜಯ್ಕುಮಾರ್ ತಿಳಿಸಿದರು.
ಮಹಾನಗರ ಪಾಲಿಕೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರ ಮನೆಗಳ ನಿರ್ಮಾಣ ಸ್ಥಳವನ್ನು 2 ಬಾರಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಪರಿಶೀಲನೆ ನಡೆಸಲಾಗಿದೆ. ಗುತ್ತಿಗೆದಾರರು ಹಾಗೂ ಇಂಜಿನಿಯರ್ಸ್ಗೆ ವೇಗವಾಗಿ ಮತ್ತು ಗುಣಮಟ್ಟದ ಕಟ್ಟಡ ನಿರ್ಮಿಸುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ ಎಂದರು.
ಪಾಲಿಕೆ ಆಯುಕ್ತ ವಿಶ್ವನಾಥ ಪಿ.ಮುದಜ್ಜಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಚವನ್ಪ್ರಾಶ್ನ ಆಯುಷ್ ಇಲಾಖೆ ಮಾರ್ಗದರ್ಶನ ಪಡೆದು ಪ್ರತಿ ಪೌರ ಕಾರ್ಮಿಕರಿಗೂ ವಿತರಿಸಲಾಗಿದೆ. ಇದರಿಂದಾಗಿ ಬೇರೆ ನಗರಗಳಿಗೆ ಹೋಲಿಸಿದ್ರೆ ನಮ್ಮ ಪಾಲಿಕೆ ವ್ಯಾಪ್ತಿಯ ಪೌರ ಕಾರ್ಮಿಕರಲ್ಲಿ ಬಹಳ ಕಡಿಮೆ ಕೊರೊನಾ ಪ್ರಕರಣ ಕಂಡು ಬಂದಿವೆ ಎಂದರು.
ತೆರಿಗೆ ಹಣಕಾಸು ಮತ್ತು ಅಪೀಲ್ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಅವರನ್ನು ಉತ್ತಮ ಹುದ್ದೆಗಳಿಗೆ ಕಳುಹಿಸಬೇಕು. ಅವರನ್ನು ಪುನಃ ಪೌರ ಕಾರ್ಮಿಕರನ್ನಾಗಿ ಮಾಡಬಾರದು ಎಂದರು. ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್ ಟಿ ವೀರೇಶ್ ಮಾತನಾಡಿದರು.