ದಾವಣಗೆರೆ: ಅಡಿಕೆನಾಡು ಎಂದೇ ಖ್ಯಾತಿ ಗಳಿಸಿರುವ ಚನ್ನಗಿರಿ ತಾಲೂಕಿನಲ್ಲಿ ಬೆಳೆಗಾರರ ಹಿತ ಕಾಪಾಡಲು ಪ್ರಾತಿನಿಧಿಕ ಸಂಸ್ಥೆ ತುಮಕೋಸ್ ತಲೆ ಎತ್ತಿ ನಿಂತಿದೆ. ಆದರೆ ಸಹಕಾರ ಸಂಘದ ಹೊಸ ಕಾನೂನು ಜಾರಿಯಿಂದ ಶೇ. 50%ರಷ್ಟು ಷೇರುದಾರ ಸದಸ್ಯರು ವೋಟಿಂಗ್ ಪವರ್ ಕಳೆದುಕೊಳ್ಳುವ ಆತಂಕದಲ್ಲಿದ್ದು, ಈ ಹಿನ್ನೆಲೆ ತುಮಕೋಸ್ ಹೈಕೋರ್ಟ್ ಮೆಟ್ಟಿಲೇರಿದೆ.
ಜಿಲ್ಲೆಯ ಚನ್ನಗಿರಿ ತಾಲೂಕು ಅಡಿಕೆ ನಾಡು ಎಂದೇ ಪ್ರಸಿದ್ದಿ, ಇಲ್ಲಿ ಸರಿಸುಮಾರು ಮುಕ್ಕಾಲು ಭಾಗ ಅಡಿಕೆ ಬೆಳೆಗೆ ರೈತರು ಅವಲಂಬಿತರಾಗಿದ್ದು, ಈ ಹಿನ್ನೆಲೆ ಅಡಿಕೆ ಬೆಳೆಗಾರರ ಹಿತ ಕಾಯಲು ತುಮಕೋಸ್ ಸಹಕಾರಿ ಸಂಘ ಅಸ್ವಿತ್ವಕ್ಕೆ ತರಲಾಗಿತ್ತು. ಸಂಘದಿಂದ ಬೆಳೆಗಾರರಿಗೆ ಅನೂಕೂಲವು ಆಗಿದೆ. ಕಾಲಕಳೆದಂತೆ ತುಮಕೋಸ್ ಉತ್ತಮ ಹೆಸರು ಪಡೆಯಿತು. ಈ ಹಿನ್ನೆಲೆ ಸಂಘದ ಆಡಳಿತ ಮಂಡಳಿ ಆಯ್ಕೆಗೆ ಪೈಪೋಟಿಯು ಶುರುವಾಗ ತೊಡಗಿತು. ಈ ಬಾರಿಯೂ ಕೂಡ ಜಿದ್ದಾಜಿದ್ದಿನ ಕಣ ಏರ್ಪಟ್ಟಿದ್ದರೆ ಇತ್ತ ಮತದಾರ ಮಾತ್ರ ಗೊಂದಲದಲ್ಲಿ ಇದ್ದಾನೆ.
ತುಮಕೋಸ್ ಬರೋಬ್ಬರಿ 12,277 ಸದಸ್ಯರನ್ನು ಒಳಗೊಂಡಿದ್ದು, ಈಗಾಗಲೇ ವಿವಿಧ ತಂಡಗಳು ತೆರೆಮರೆಯಲ್ಲಿ ಕಾರ್ಯರೂಪಕ್ಕೆ ಇಳಿದಿವೆ. ಇದರ ನಡುವೆ ಅರ್ಹ, ಅನರ್ಹ ಮತದಾರರು ಯಾರು ಎಂಬ ಗೊಂದಲ ಉಂಟಾಗಿದೆ, ಒಂದು ವೇಳೆ ಸಹಕಾರಿ ಸಂಘದ ಕಾಯ್ದೆ ಪಾಲನೆಯಾದರೇ ಅರ್ಧದಷ್ಟು ಮಂದಿ ಮತ ಕಳೆದುಕೊಳ್ಳಲಿದ್ದಾರೆ, ಹೊಸ ನಿಯಮದಂತೆ ಸದಸ್ಯರಾಗಿದ್ದು ನಿಗದಿತ ವ್ಯವಹಾರ ನಡೆಸದಿದ್ದರೆ, ವಾರ್ಷಿಕ ಮೂರು ಸಭೆಗಳಿಗೆ ಗೈರು ಹಾಜರಾಗಿದ್ದರೆ ಮತ ಚಲಾಯಿಸುವ ಹಕ್ಕು ಇರುವುದಿಲ್ಲ, ಈ ನಿಯಮ ಪಾಲನೆಯಾದರೆ ಕೇವಲ 6.178 ಸದಸ್ಯರು ಮಾತ್ರ ಹಕ್ಕು ಹೊಂದಿರುತ್ತಾರೆ.
ಒಟ್ಟಾರೆ ಈ ಗೊಂದಲದಿಂದ ತುಮಕೋಸ್ ಒಮ್ಮತದ ನಿರ್ಣಯದ ಮೇರೆಗೆ ಹೈಕೋರ್ಟ್ ಮೊರೆ ಹೋಗಿದ್ದು ವಿನಾಯಿತಿ ನೀಡುವಂತೆ ಕೋರಿದ್ದು, ಮುಂದಿನ ತಿಂಗಳು ಚುನಾವಣೆ ನಡೆಯುವ ಭರವಸೆ ಹೊಂದಿದ್ದಾರೆ.